ಕಲಬುರಗಿ: ಐಟಿ ನವೋದ್ಯಮಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಹೆಚ್ಚಿನ ಮೂಲಸೌಕರ್ಯ ಮತ್ತು ತಾಂತ್ರಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ನಗರದಲ್ಲಿ ಇನ್ಕ್ಯುಬೇಶನ್ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ–ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜು, ವಿಜ್ಞಾನ ಪದವಿ ಕಾಲೇಜು ಹಾಗೂ ನವೋದ್ಯಮಿಗಳೊಂದಿಗೆ ಸಭೆ ನಡೆಸಿದ ಅವರು, ಎಂಜಿನಿಯರಿಂಗ್ ಕಾಲೇಜಿನವರು ನಗರದಲ್ಲಿ ಸುಮಾರು 5 ಸಾವಿರ ಚದುರ ಅಡಿ ಅಳತೆಯ ಸುಸಜ್ಜಿತ ಕಟ್ಟಡ ನೀಡಿದಲ್ಲಿ ಕೂಡಲೇ ಕೇಂದ್ರ ಆರಂಭಿಸಲಾಗುವುದು. ಇದಕ್ಕಾಗಿ ಎಲ್ಲಾ ನವೋದ್ಯಮಿಗಳು ಸಭೆ ಸೇರಿ ತಮಗೆ ಬೇಕಾದ ಮೂಲಸೌಕರ್ಯ ಮತ್ತು ತಾಂತ್ರಿಕ ಸಹಾಯದ ಬೇಡಿಕೆಯನ್ನು ನೀಲಿನಕ್ಷೆ ರೂಪದಲ್ಲಿ ಸಿದ್ದಪಡಿಸಿ ನೀಡಿದಲ್ಲಿ ಅದನ್ನು ಪೂರೈಸಲಾಗುವುದು’ ಎಂದರು.
‘ಜಿಲ್ಲೆಯಲ್ಲಿ ಅಂದಾಜು 90 ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ 300 ಸ್ಟಾರ್ಟ್ ಅಪ್ ಕಂಪನಿಗಳು ನೊಂದಾಯಿಸಿಕೊಂಡಿವೆ’ ಎಂದು ಹೇಳಿದರು.
ರಾಜ್ಯದ ಯುವಜನರಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿ ನೀಡಲು ಪ್ರಮುಖ ಐಟಿ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿ ಉದ್ಯೋಗಾಧಾರಿತ ಕೌಶಲ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ದೇಶದಲ್ಲಿಯೇ ಮಾದರಿಯಾಗಿ ‘ನಿಪುಣ ಕರ್ನಾಟಕ’ ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಲಾಗಿದ್ದು, ಇದುವರೆಗೆ ಈ ಭಾಗದಿಂದ 20 ಸಾವಿರ ಸೇರಿ 1 ಲಕ್ಷ ಯುವಜನರು ಅತ್ಯಾಧುನಿಕ ಕೌಶಲ ಪಡೆಯಲು ಉತ್ಸುಕರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದರು.
ವಿಶೇಷವಾಗಿ ಇಂಜಿನೀಯರಿಂಗ್, ವಿಜ್ಞಾನ ಮತ್ತು ತಾಂತ್ರಿಕ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ರೂಪಿಸಿರುವ ಈ ಯೋಜನೆಗೆ ರಾಜ್ಯ ಸರ್ಕಾರ ₹ 300 ಕೋಟಿ ಖರ್ಚು ಮಾಡಲಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಬಯೊ ಮೆಕ್ಯಾನಿಕ್, ಡೇಟಾ ಅನಾಲಿಟಿಕ್ಸ್, ಬ್ಲಾಕ್ ಚೈನ್, ಮ್ಯಾನುಫ್ಯಾಕ್ಚರ್, ಮಷಿನ್ ಲರ್ನಿಂಗ್, ನ್ಯಾಚುರಲ್ ಮಾಡ್ಯೂಲ್, ಸೈಬರ್ ಸೆಕ್ಯುರಿಟಿ ಹೀಗೆ ನಾನಾ ಕ್ಷೇತ್ರದಲ್ಲಿ ಕೌಶಲಗಳನ್ನು ಯುವಕ–ಯುವತಿಯರಿಗೆ ನೀಡಿ ಅವರನ್ನು ಉದ್ಯೋಗ ಪಡೆಯಲು ಸಶಕ್ತರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಪ್ರಸ್ತುತ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಹಳೆ ವಿದ್ಯಾರ್ಥಿಗಳು, ನಿರುದ್ಯೋಗಿಗಳಿಗೂ ಈ ಯೋಜನೆಯಡಿ ತರಬೇತಿ ನೀಡಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಉಪ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಮುರಳಿಧರ ರತ್ನಗಿರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.