ಜೇವರ್ಗಿ: ರಂಜಾನ್ ಮುಸ್ಲಿಮರ ಪವಿತ್ರ ತಿಂಗಳಾಗಿದ್ದು, ಅಲ್ಲಾನನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗವಾಗಿದೆ. ಇದು ಕೋಮು ಸೌಹಾರ್ದದ ಸಂಕೇತವಾಗಿದೆ. ಎಲ್ಲರೂ ಸೇರಿ ಹಬ್ಬಹರಿದಿನ ಆಚರಿಸಿದರೆ, ಸಮಾಜದಲ್ಲಿ ಸಂತೋಷ ನೆಮ್ಮದಿ ಶಾಂತಿ ನೆಲಸಲಿದೆ’ ಎಂದು ಇಲಕಲ್ನ ಚಿಂತಕ ಲಾಲ್ ಹುಸೇನಸಾಬ ಕಂದಗಲ್ ಹೇಳಿದರು.
ಪಟ್ಟಣದ ಮಹಿಬೂಬ ಕಲ್ಯಾಣಮಂಟಪದಲ್ಲಿ ಜಮಾತೇ ಇಸ್ಲಾಮೀ ಹಿಂದ್ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ‘ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗಲಿದೆ. ಪವಿತ್ರ ಕುರ್ಆನ್ ಮನುಷ್ಯನಿಗೆ ದೇಹ ದಂಡಿಸಿ, ಶಿಕ್ಷೆ ಕೊಡಲು ಉಪವಾಸ ಮಾಡು ಅಂತ ಹೇಳಿಲ್ಲ. ನನ್ನೊಳಗಿನ ಭ್ರಷ್ಟಾಚಾರ ಹೊಡೆದೋಡಿಸಲು, ಆತ್ಮಶುದ್ಧಿಗಾಗಿ ಉಪವಾಸ ಮಾಡುವುದಾಗಿದೆ. ಜಗತ್ತಿನ ಶ್ರೇಷ್ಠ ಆರಾಧನೆ ಉಪವಾಸ’ ಎಂದು ಹೇಳಿದರು.
ನೆಲೋಗಿಯ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಹಿಂದೂಗಳಿಗೆ ಶ್ರಾವಣ, ಮುಸ್ಲಿಮರಿಗೆ ರಂಜಾನ್ ಮಾಸ ಅತ್ಯಂತ ಪವಿತ್ರವಾಗಿದೆ. ಉಪವಾಸ ತನಗಾಗಿ ಮಾಡುವುದಲ್ಲ. ಅಲ್ಲಾಹನಿಗಾಗಿ, ಅವನ ಕರುಣೆಗೆ ಉಪವಾಸ ಮಾಡಲಾಗುತ್ತದೆ. ಜಾತಿ, ಮತ, ಪಂಥ ಮೀರಿದ ನಾಡು ಜೇವರ್ಗಿ. 2ನೇ ಕಲ್ಯಾಣ ಕ್ರಾಂತಿ ಜೇವರ್ಗಿಯ ಪುಣ್ಯಭೂಮಿಯಲ್ಲಿ ನಡೆದಿದ್ದು ನಮ್ಮೆಲ್ಲರ ಪುಣ್ಯ. ಇಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿದ್ದಾರೆ’ ಎಂದು ಹೇಳಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಷಣ್ಮುಖಪ್ಪಗೌಡ ಹಿರೇಗೌಡ, ವಸಂತ ನರಿಬೋಳ, ದಯಾನಂದ ದೇವರಮನಿ, ರೇವಣಸಿದ್ದಪ್ಪ ಸಂಕಾಲಿ, ಅಬ್ದುಲ್ ರಹೆಮಾನ ಪಟೇಲ, ಆದಪ್ಪ ಸಾಹು ಸಿಕೇದ್, ಮಹೇಶ ರಾಠೋಡ, ಭೀಮರಾಯ ನಗನೂರ, ಅಲ್ಲಾಭಕ್ಷ ಬಾಗವಾನ್, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಪಿಎಸ್ಐ ಗಜಾನಂದ ಬಿರಾದಾರ, ಮೋಹಿನುದ್ದೀನ್ ಇನಾಮದಾರ, ಬಿ.ಎನ್. ಪಾಟೀಲ ಚನ್ನೂರ, ಎಂ.ಡಿ. ರೌಫ್ ಹವಾಲ್ದಾರ್, ಪುಂಡಲೀಕ ಗಾಯಕವಾಡ, ಕಲ್ಯಾಣಕುಮಾರ ಸಂಗಾವಿ, ಎಸ್.ಕೆ. ಬಿರಾದಾರ, ಸೋಮಶೇಖರ ಗುಡೂರ, ಸಿದ್ದು ಮದರಿ, ಈರಣ್ಣ ಬನ್ನೆಟ್ಟಿ, ಮಲ್ಲಿಕಾರ್ಜುನ ಪಾಟೀಲ ಬಿರಾಳ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಶಿವಕುಮಾರ ಕಲ್ಲಾ, ಸಿದ್ದು ಅಂಕುಶದೊಡ್ಡಿ, ವಿಶ್ವನಾಥ ಇಮ್ಮಣ್ಣಿ, ಸಲೀಂ ಕಣ್ಣಿ, ಸಂಗಣಗೌಡ ಪಾಟೀಲ ರದ್ದೇವಾಡಗಿ ಸೇರಿದಂತೆ ಹಿಂದೂ-ಮುಸ್ಲಿಮರು ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.