ಚಿಂಚೋಳಿ (ಕಲಬುರ್ಗಿ ಜಿಲ್ಲೆ): ‘ಪ್ರವಾಸಿಗರನ್ನು ಸೆಳೆಯಲು ಕಲಬುರ್ಗಿ ನಗರದಲ್ಲಿ ‘ಹೆಲಿಪೋರ್ಟ್’ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ’ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ. ಯೋಗೀಶ್ವರ ಹೇಳಿದರು.
ಚಿಂಚೋಳಿ ತಾಲ್ಲೂಕಿನ ಎತ್ತಿಪೋತೆ ಜಲಪಾತದ ಪ್ರವಾಸಿ ತಾಣಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ‘ಈ ಹೆಲಿಪೋರ್ಟ್ಗೆ 5 ಎಕರೆ ಜಮೀನು ಅಗತ್ಯವಿದ್ದು, ಸಂಸದ ಡಾ.ಉಮೇಶ ಜಾಧವ ಅವರು ಕೊಡಿಸಲಿದ್ದಾರೆ’ ಎಂದರು.
‘ಚಂದ್ರಂಪಳ್ಳಿ ಜಂಗಲ್ ಲಾಡ್ಜ್ ಹಾಗೂ ಎತ್ತಿಪೋತೆ ಜಲಪಾತ ತಾಣದಲ್ಲಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆಯಿಂದ ₹ 2 ಕೋಟಿ ಅನುದಾನ ಮಂಜೂರು ಮಾಡಲಾಗುವುದು’ ಎಂದೂ ಸಚಿವರು ಹೇಳಿದರು.
‘ಎತ್ತಿಪೋತೆಯಲ್ಲಿ ಯಾತ್ರಿ ನಿವಾಸ, ಸಿ.ಸಿ. ರಸ್ತೆ, ರೋಪ್ ವೇ ಮತ್ತು ಅಪಘಾತ ತಡೆಗೆ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು. ಚಂದ್ರಂಪಳ್ಳಿಗೆ ಜಂಗಲ್ ಲಾಡ್ಜ್ ಮಂಜೂರಾಗಿದೆ. ಇಲ್ಲಿ ಸಾಹಸ ಮತ್ತು ಜಲಕ್ರೀಡೆಗಳಿಗೆ ಒತ್ತು ನೀಡಲಾಗುವುದು. ಈ ಎಲ್ಲ ಕೆಲಸಕ್ಕಾಗಿ 5 ಎಕರೆ ಜಮೀನು ನೀಡಿ’ ಎಂದು ತಹಶೀಲ್ದಾರರಿಗೆ ಸೂಚಿಸಿದರು.
ಸಂಸದ ಡಾ.ಉಮೇಶ ಜಾಧವ, ಶಾಸಕ ಡಾ.ಅವಿನಾಶ ಜಾಧವ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ರಾಜು ರಾಠೋಡ, ಕುಂಚಾವರಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಜಾತಾ ರಮೇಶ ಸಂಕಟಿ, ಗೌತಮ ಪಾಟೀಲ, ಅಶೋಕ ಚವ್ಹಾಣ, ವಿಜಯಕುಮಾರ ರಾಠೋಡ, ಪ್ರೇಮಸಿಂಗ ಜಾಧವ, ಗಿರಿರಾಜ ನಾಟಿಕಾರ, ಬಿಜೆಪಿ ಮುಖಂಡ ಸಂತೋಷ ಗಡಂತಿ, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಕೃಷ್ಣಾ ಅಗ್ನಿಹೋತ್ರಿ, ಇ.ಒ ಅನಿಲ ರಾಠೋಡ, ಶಿವಶರಣಪ್ಪ ಕೇಶ್ವಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬುರಾವ್ ಪಾಟೀಲ, ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಸಿದ್ಧಾರೂಢ, ಗಜಾನಂದ ಮೊದಲಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.