ಪ್ರಕೃತಿ ನಗರ (ಸೇಡಂ): ‘ಪ್ರಾಥಮಿಕ ಹಂತವಷ್ಟೇ ಅಲ್ಲ, ಉನ್ನತ ಶಿಕ್ಷಣವಾದ ವೈದ್ಯಕೀಯ, ತಾಂತ್ರಿಕ ಶಿಕ್ಷಣವನ್ನೂ ಮಾತೃಭಾಷೆಯಲ್ಲೇ ಕಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ’ ಎಂದು ರಾಷ್ಟೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಪ್ರತಿಪಾದಿಸಿದರು.
ಪಟ್ಟಣದ ಹೊರವಲಯದ ಬೀರನಹಳ್ಳಿ ಕ್ರಾಸ್ ಸಮೀಪದಲ್ಲಿ ನಿರ್ಮಿಸಿರುವ ಪ್ರಕೃತಿ ನಗರದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದ ಶೈಕ್ಷಣಿಕ ಸಮಾವೇಶದಲ್ಲಿ ಗುರುವಾರ ಅವರು ಮಾತನಾಡಿದರು.
‘ಮಾತೃಭಾಷೆಯಲ್ಲೇ ಕಲಿಕೆ ಸಾಧ್ಯವಾಗುವುದರಿಂದ ಹೆಚ್ಚಿನ ವಿಷಯಗಳನ್ನು ಪರಿಣಾಮಕಾರಿಯಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಾತೃಭಾಷೆಯಲ್ಲಿ ಕಲಿಕೆ ನಡೆಯಬೇಕು. 2020ರಲ್ಲಿ ಅಂಗೀಕರಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಈ ಅಂಶಗಳನ್ನು ಅಳವಡಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಆಟದ ಜೊತೆಗೆ ಪರಿಸರ ಶಿಕ್ಷಣವನ್ನೂ ನೀಡುವ ಪ್ರಸ್ತಾವ ಇದೆ. ಆದ್ದರಿಂದ ಇದನ್ನು ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು. ಬರೀ ಕಲಿಕೆ ಅಷ್ಟೇ ಅಲ್ಲದೇ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕೌಶಲ ಶಿಕ್ಷಣ ಕೊಡಬೇಕು ಎಂದೂ ಅವರು ಪ್ರತಿಪಾದಿಸಿದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಮಾತನಾಡಿ, ‘ಶಿಕ್ಷಣಕ್ಕೆ ಜಗತ್ತು ಬದಲಿಸುವ ಶಕ್ತಿಯಿದ್ದು, ಶಿಕ್ಷಣವಿಲ್ಲದ ಸಮಾಜವನ್ನು ಊಹಿಸಲು ಅಸಾಧ್ಯ. ಶಿಕ್ಷಣಕ್ಕೆ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಮಾಜವನ್ನು ಬದಲಿಸುವ ಶಕ್ತಿಯಿದೆ’ ಎಂದರು.
ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ಭಾರತೀಯ ಶಿಕ್ಷಣಕ್ಕೆ ಮಹತ್ವ ಸಿಗಬೇಕಾದರೆ ಮಾತೃಭಾಷಾ ಮತ್ತು ರಾಷ್ಟ್ರಭಾಷಾ ಶಿಕ್ಷಣದತ್ತ ಹೆಚ್ಚಿನ ಆದ್ಯತೆ ಕೊಡಬೇಕಿದೆ. ಪದವಿ ಆಧಾರಿತ ಶಿಕ್ಷಣದ ದಿಕ್ಕನ್ನು ಬದಲಿಸಿ, ಜ್ಞಾನ ಹಾಗೂ ಉದ್ಯೋಗಾಧಾರಿತ ಶಿಕ್ಷದತ್ತ ಸಾಗಬೇಕಿದೆ’ ಎಂದರು.
ತಮಿಳುನಾಡಿನ ಪಳನಿಯ ಅನಾದಿ ಫೌಂಡೇಶನ್ನ ಚಿಂತಕಿ ಅನಂತಲಕ್ಷ್ಮೀ, ಮಾಜಿ ಶಾಸಕ ಶಿವನಗೌಡ ನಾಯಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾರತ ವಿಕಾಸ ಸಂಗಮ ಸಂಸ್ಥಾಪಕ ಕೆ.ಎನ್ ಗೋವಿಂದಾಚಾರ್ಯ, ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಮತ್ತು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ ಅವರನ್ನು ವಿಜಯಪುರದ ಸಿದ್ದೇಶ್ವರ ಆಶ್ರಮದ ವತಿಯಿಂದ ವಿಶೇಷವಾಗಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದ ದೇವಗಿರಿ ಮಹಾರಾಜ್, ಹಾಲಕೆರೆ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ರಮಾ ಅಚ್ಯುತ್ ಪಾಂಡೆ, ಮಣಿಪುರದ ಮುಖ್ಯಮಂತ್ರಿ ಸಲಹೆಗಾರ ತೋಕ್ಟೋ ರಾಧೆಶ್ಯಾಮ್ ಸಿಂಗ್, ಡಾ.ಪ್ರಕಾಶ ಮಿಶ್ರಾ, ನಿವೇದಿತಾ ಬಿಂದೆ, ಅಶೋಕಸ್ವಾಮಿ ಇದ್ದರು.
ಉತ್ಸವಕ್ಕೆ ಸರ್ಕಾರ ಅಡ್ಡಿ: ಕಾಗೇರಿ ಅಸಮಾಧಾನ
ಭಾರತದ ಪರಂಪರೆ, ಜ್ಞಾನ ಪದ್ಧತಿಯನ್ನು ಅನಾವರಣಗೊಳಿಸಲು ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.
‘ಸರ್ಕಾರವೇ ನಿಂತು ಇಂತಹ ಕಾರ್ಯಕ್ರಮವನ್ನು ಮಾಡಬೇಕಿತ್ತು. ಆದರೆ, ಅದನ್ನು ಮಾಡುತ್ತಿಲ್ಲ. ಮಾಡುವ ಕಾರ್ಯಕ್ರಮವನ್ನು ಪ್ರೋತ್ಸಾಹಿಸದೇ ಇರುವುದು ಅಕ್ಷಮ್ಯ’ ಎಂದು ಹರಿಹಾಯ್ದರು.
ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡಗಳನ್ನು ಕಳುಹಿಸಿಕೊಡಲು ಮೊದಲು ಒಪ್ಪಿದ್ದ ಶಿಕ್ಷಣ ಇಲಾಖೆ, ನಂತರ ಆ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಸ್ತಾಪಿಸದೇ ಸಂಸದ ಕಾಗೇರಿ ಸರ್ಕಾರದ ವಿರುದ್ಧ ಬೇಸರ ಹೊರಹಾಕಿದರು.
ಇಂದು ವಿಶ್ವವಿದ್ಯಾಲಯಗಳು ಭ್ರಷ್ಟಾಚಾರ ಮತ್ತು ಜಾತಿಯ ಕೇಂದ್ರಗಳಾಗಿವೆ. ಕುಲಪತಿ ಹುದ್ದೆಗೆ ಜಾತಿಯನ್ನು ಆಧರಿಸಿ ನೇಮಕ ಮಾಡಿಕೊಳ್ಳುವ ರೂಢಿ ಇದೆ. ಇದು ತಪ್ಪಬೇಕು
ಇಂದು ವಿಶ್ವವಿದ್ಯಾಲಯಗಳು ಭ್ರಷ್ಟಾಚಾರ ಮತ್ತು ಜಾತಿಯ ಕೇಂದ್ರಗಳಾಗಿವೆ. ಕುಲಪತಿ ಹುದ್ದೆಗೆ ಜಾತಿಯನ್ನು ಆಧರಿಸಿ ನೇಮಕ ಮಾಡಿಕೊಳ್ಳುವ ರೂಢಿ ಇದೆ. ಇದು ತಪ್ಪಬೇಕುಅರವಿಂದ ಬೆಲ್ಲದ, ಶಾಸಕ
ಶಿಕ್ಷಣ ಕೇಂದ್ರಗಳು ವ್ಯಾಪಾರೀಕರಣದ ಕೇಂದ್ರಗಳಾಗುತ್ತಿರುವುದು ದುರಂತದ ಸಂಗತಿ. ಅವು ಜ್ಞಾನ ಮತ್ತು ಸೇವೆಯ ಕೇಂದ್ರವಾಗಬೇಕು. ಮೌಲ್ಯಾಧಾರಿತ ಶಿಕ್ಷಣ ನೀಡಬೇಕುನ್ಯಾ. ಶಿವರಾಜ ಪಾಟೀಲ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ
ನಾನು ಮಾರಿಷಸ್ನಲ್ಲಿದ್ದರೂ ನನ್ನ ಹೃದಯ ಹಿಂದುಸ್ತಾನಿ ಆಗಿದೆ. ವಸುದೈವ ಕುಟುಂಬಕಂ ಎಂದು ಜಗತ್ತಿಗೆ ಸಾರಿದ ದೇಶದವನು ಎಂಬ ಹೆಮ್ಮೆ ಇದೆ.ಯುಶಿಷ್ಠಿರ್ ಮುನ್ ಬೋಧ್, ಮಾರಿಷಸ್ ಗಣರಾಜ್ಯದ ಶಿಕ್ಷಣ ಸಚಿವಾಲಯದ ಶಾಶ್ವತ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.