ವಾಡಿ ನಿಲ್ದಾಣದಲ್ಲಿ ಕೆಕೆ ಎಕ್ಸ್ಪ್ರೆಸ್ ರೈಲು ನಿಂತಿರುವ ದೃಶ್ಯ ಮತ್ತು ಬಂಧಿತ ಆರೋಪಿ ದೀಪ್ಸಿಂಗ್
ವಾಡಿ (ಕಲಬುರಗಿ ಜಿಲ್ಲೆ): ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ (ಕೆಕೆ) ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ವಾಡಿ ರೈಲ್ವೆ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ದೀಪ್ಸಿಂಗ್ (33) ಬಂಧಿತ ಆರೋಪಿ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಚಿತ್ತಾಪುರದ ಜೈಲಿನಲ್ಲಿ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಕೆ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ರಾತ್ರಿ 1ರ ಸುಮಾರಿಗೆ ರೈಲ್ವೆ ಕಂಟ್ರೋಲ್ ರೂಂಗೆ ಕರೆ ಬಂದಿತ್ತು. ವಾಡಿ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ ರೈಲ್ವೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಶ್ವಾನಗಳೊಂದಿಗೆ ಸುಮಾರು 4 ಗಂಟೆ ತಪಾಸಣೆ ಮಾಡಿದರು. ರೈಲಿನ 22 ಬೋಗಿಗಳಲ್ಲಿದ್ದ ಸಾವಿರಾರು ಪ್ರಯಾಣಿಕರನ್ನು ಕೆಳಗೆ ಇಳಿಸಿ, ಇಡೀ ಬೋಗಿಗಳನ್ನು ತಪಾಸಣೆ ಮಾಡಿದರು. ಇದೊಂದು ಹುಸಿ ಬಾಂಬ್ ಕರೆ ಎಂಬುದು ಖಚಿತವಾಯಿತು ಎಂದು ಮಾಹಿತಿ ನೀಡಿದರು.
ಭಯಪಟ್ಟು ಫೋನ್ ಕರೆ: ‘ಇದೇ ರೈಲಿನಲ್ಲಿ ದೆಹಲಿಯಿಂದ ಗುಂತಕಲ್ಗೆ ಪ್ರಯಾಣಿಸುತ್ತಿದ್ದ ದೀಪ್ಸಿಂಗ್ ಎಂಬಾತ ಭಯಪಟ್ಟು ತನ್ನ ತಂದೆಯ ಫೋನ್ ನಂಬರ್ನಿಂದ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾನೆ. ಮುಂದೆ ಏನಾಗುತ್ತೆ ಎಂಬ ಭಯದಿಂದ ಮೊಬೈಲ್ ಅನ್ನು ಫ್ಲೈಟ್ ಮೂಡ್ಗೆ ಹಾಕಿ ಏನು ಗೊತ್ತಿಲ್ಲದ್ದವರಂತೆ ಕುಳಿತಿದ್ದ. ಟ್ರೂ ಕಾಲರ್ ಆ್ಯಪ್ನಲ್ಲಿ ಫೋನ್ ಕರೆ ಮಾಡಿದ್ದ ವ್ಯಕ್ತಿಯ ಫೋಟು ಪತ್ತೆಯಾಗಿತ್ತು. ಫೋಟೊ ಆಧಾರದ ಮೇಲೆ ವಾಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ವಾಡಿ ರೈಲ್ವೆ ಠಾಣೆಯ ಪಿಎಸ್ಐ ವೀರಭದ್ರಪ್ಪ ಎಚ್.ಎಸ್. ‘ಪ್ರಜಾವಾಣಿ’ಗೆ ತಿಳಿಸಿದರು.
‘ಆರ್ಪಿಎಫ್, ವಾಡಿ ಠಾಣೆಯ ಸಿಬ್ಬಂದಿ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸೇರಿ 40ಕ್ಕೂ ಹೆಚ್ಚು ಸಿಬ್ಬಂದಿ ರಾತ್ರಿ 1.30ರಿಂದ 4.30ರ ವರೆಗೆ ಇಡೀ ರೈಲನ್ನು ತಪಾಸಣೆ ಮಾಡಲಾಯಿತು. ಯಾವುದೇ ಬಾಂಬ್ ಇಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಪ್ರಯಾಣಿಕರು ನಿರಾಂತಕವಾದರು’ ಎಂದರು.
ಕೆಕೆ ಎಕ್ಸ್ಪ್ರೆಸ್ ರೈಲಿನಲ್ಲಿ ತಪಾಸಣೆಯಲ್ಲಿ ನಿರತವಾಗಿದ್ದ ಬಾಂಬ್ ನಿಷ್ಕ್ರಿಯೆ ದಳದ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.