ADVERTISEMENT

ವಾಡಿ: ರೈಲಿಗೆ ಸಿಲುಕಿ ವ್ಯಕ್ತಿ ದುರ್ಮರಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 16:20 IST
Last Updated 21 ಸೆಪ್ಟೆಂಬರ್ 2022, 16:20 IST
   

ವಾಡಿ (ಕಲಬುರಗಿ): ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ವಾಡಿ ಪಟ್ಟಣದ ರೈಲು ನಿಲ್ದಾಣದಲ್ಲಿ ಜರುಗಿದೆ.

ಮುಂಬೈ ಮೂಲದ ಅಯ್ಯಪ್ಪ ರಾಜ್ ರೆಡ್ಡಿಯಾರ್ (56) ಎಂಬ ವ್ಯಕ್ತಿಯೇ ರೈಲಿನ ಗಾಲಿಗೆ ಸಿಲುಕಿ ನರಳಾಡಿ ಜೀವತೆತ್ತ ದುರ್ದೈವಿ.

ನಾಗರಕೋಯಿಲ್ ರೈಲಿನ ಮೂಲಕ ಕುಟುಂಬಸ್ಥರ ಜೊತೆ ಮುಂಬೈನಿಂದ ಮಧುರೈಗೆ ತೆರಳುತ್ತಿದ್ದ ವ್ಯಕ್ತಿ ಪಟ್ಟಣದ ರೈಲು ನಿಲ್ದಾಣದಲ್ಲಿ ಆಹಾರ ಪೊಟ್ಟಣ ತೆಗೆದುಕೊಳ್ಳಲು ಇಳಿದಿದ್ದಾನೆ. ರೈಲು ತೆರಳುತ್ತಿರುವುದು ಕಂಡು ಅವಸರದಲ್ಲಿ ರೈಲು ಹತ್ತುವ ಸಮಯದಲ್ಲಿ ಕಾಲು ಜಾರಿ ಬಿದ್ದು ಚಕ್ರಕ್ಕೆ ಸಿಲುಕಿದ್ದಾರೆ. ಘಟನೆಯಲ್ಲಿ ವ್ಯಕ್ತಿಯ ಎರಡು ಕಾಲುಗಳು ಹಾಗೂ ಒಂದು ಕೈ ತುಂಡಾಗಿವೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ವಾಡಿ ಸಮುದಾಯ ಆಸ್ಪತ್ರೆಗೆ ನಂತರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ 3 ತಾಸಿನ ಬಳಿಕ ತೀವ್ರ ರಕ್ತಸ್ರಾವದಿಂದ ಮೃತಪಟ್ಟರು.

ಯಾದಗಿರಿ ರೈಲು ನಿಲ್ದಾಣ ದಾಟಿದ ಬಳಿಕ ವಿಷಯ ಕುಟುಂಬಸ್ಥರಿಗೆ ಗೊತ್ತಾಗಿದೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ವಾಡಿ ರೈಲ್ವೆ ಪಿಎಸ್ಐ ಮಹೆಮೂದ್ ಪಾಷಾ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.