
ಕಲಬುರಗಿ: ‘ಜಿಲ್ಲೆಯ ಹೊನ್ನಕಿರಣಗಿ ಮತ್ತು ನದಿಸಿನ್ನೂರು ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿ ಒಟ್ಟು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಕೆಕೆಆರ್ಡಿಬಿ ಅಧ್ಯಕ್ಷರೂ ಆಗಿರುವ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಯೋಜನೆಯನ್ನು ಜಾಗತಿಕ ಟೆಂಡರ್ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯ ಸರ್ಕಾರ ಜವಳಿ ಪಾರ್ಕ್ನ ಗೇಟ್ ವರೆಗೆ ₹ 393.77 ಕೋಟಿ ವೆಚ್ಚದಲ್ಲಿ ನೀರು, ವಿದ್ಯುತ್ ಪೂರೈಕೆ ಮತ್ತು ರಸ್ತೆ ಅಭಿವೃದ್ಧಿ ಮಾಡಲು ಮಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸಲು ಕ್ರಮಕೈಗೊಂಡಿದೆ’ ಎಂದಿದ್ದಾರೆ.
‘ಸಚಿವ ಸಂಪುಟದ ಅನುಮೋದನೆಯಂತೆ ಮೂಲಸೌಕರ್ಯಕ್ಕೆ ವೆಚ್ಚ ಮಾಡುವ ಒಟ್ಟು ಹಣದಲ್ಲಿ ₹ 150 ಕೋಟಿ ಕೆಕೆಆರ್ಡಿಬಿ ಭರಿಸುತ್ತಿದೆ. 2024–25ನೇ ಸಾಲಿನಲ್ಲಿ ₹ 45.81 ಕೋಟಿಗಳನ್ನು ಕೆಕೆಆರ್ಡಿಬಿ ಬಿಡುಗಡೆ ಮಾಡಿದೆ’ ಎಂದು ಸಚಿವರು ತಿಳಿಸಿದ್ದಾರೆ.
‘ಪಿಎಂ ಮಿತ್ರ ಪಾರ್ಕ್ ಒಳಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮೌಲ್ಯಮಾಪನ ಸಮಿತಿ (ಪಿಪಿಪಿಎಸಿ) ಅನುಮೋದನೆಗೆ ಮಂಡಿಸಲಾಗಿದೆ. ಅನುಮತಿ ಲಭಿಸಿದ ನಂತರ ಜಾಗತಿಕ ಟೆಂಡರ್ ಮೂಲಕ ಮಾಸ್ಟರ್ ಡೆವೆಲಪರ್ ಆಯ್ಕೆ ಮಾಡಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.