ADVERTISEMENT

ಕಮಲಾಪುರ| ನವಜಾತ ಶಿಶು ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 8:35 IST
Last Updated 24 ಫೆಬ್ರುವರಿ 2023, 8:35 IST
   

ಕಮಲಾಪುರ (ಕಲಬುರಗಿ ಜಿಲ್ಲೆ): ಹೆರಿಗೆ ಸಮಯದಲ್ಲಿ ಆರೋಗ್ಯ ಸಿಬ್ಬಂದಿ ನಿರ್ಲಕ್ಷದಿಂದ ನವಜಾತ ಶಿಸು ಮೃತಪಟ್ಟಿದೆ ಎಂದು ಆರೋಪಿಸಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಸಂಬಂಧಿಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಜಾವರ ಗಲ್ಲಿಯ ಗರ್ಭಿಣಿ ಅಫ್ಸಾನಾ ಬೇಗಂ ಕುತಬೋದ್ದೀನ್ ನಿರ್ಣಾ ಬೆಳಿಗ್ಗೆ 10.30ಕ್ಕೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ 10.40 ಕ್ಕೆ ಹೆರಿಗೆಯಾಗಿದೆ. ಗಂಡು ಮಗು ಜನಿಸಿದೆ. ಅಸ್ವಸ್ಥಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದಾರೆ.

ಆ ಸಮಯದಲ್ಲಿ ಆಂಬುಲೆನ್ಸ್ ಸಹ ಇರಲಿಲ್ಲ, ಖಾಸಗಿ ವಾಹನದ ಮೂಲಕ ಕಲಬುರಗಿ ಗಚ್ಚಿನಮನಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿನ ಶಿಶು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದರು.

ADVERTISEMENT

ಶಿಶು ಹೆರಿಗೆ ಸಮಯದಲ್ಲೇ ಮೃತಪಟ್ಟಿದ್ದು ತಮ್ಮ ಪ್ರಮಾದ ಮುಚ್ಚಿಹಾಕಲು ನಮಗೆ ಮುಂದಿನ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿ ಯಾಮಾರಿಸಿದ್ದಾರೆ ಎಂದು ಶಿಶುವಿನ ತಂದೆ ಕುತಬೋದ್ದೀನ್ ನಿರ್ಣಾ ಆರೋಪಿಸಿದ್ದಾರೆ.

ಪ್ರತಿ ದಿನ ಈ ರೀತಿಯ ಪ್ರಕರಣಗಳು ಮರುಕಳಿಸುತ್ತಿವೆ.

ಅವುಗಳನ್ನು ಕಡತದಲ್ಲಿ ಸಹ ದಾಖಲಿಸತ್ತಿಲ್ಲ. ಜೀವಕ್ಕೆ ಬೆಲೆ ಇಲ್ಲದಂತೆ ಪಡೆದುಕೊಳ್ಳುತ್ತಿದ್ದಾರೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ನೇಮಿಸಬೇಕು ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ, ಶರಣು ಗೌರೆ, ತಯ್ಯಬ್ ಚೌದ್ರಿ, ಅರುಣ ಧಮ್ಮೂರ, ಪ್ರಶಾಂತ ಮಾನಕಾರ, ಕಲ್ಲಪ್ಪ ನವನಿಹಾಳ, ಚನ್ನವೀರ ದಸ್ತಾಪುರ ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಟಿಎಚ್ಒ ಮಾರುತಿ ಕಾಂಬಳೆ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣ ಕುರಿತು ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವೈದ್ಯಾಧಿಕಾರಿ ವಿಜಯ ಸ್ಯಾಮುವೆಲ್ ಇದ್ದರು.

ಸಿಪಿಐ ವಿ. ನಾರಾಯಣ, ಪಿಎಸ್ಐ ವಿಶ್ವನಾಥ ಮುದ್ದಾರೆಡ್ಡಿ, ಸಿಬ್ಬಂದಿಯಾದ ಮನೋಜ ಸ್ವಾಮಿ, ಶ್ರೀಮಂತ ಜಮಾದಾರ, ರಾಮಚಂದ್ರ, ಶರಣು ಬಂದೋಬಸ್ತ್ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.