ADVERTISEMENT

ಅಫಜಲಪುರ | ಪಿಎಸ್‌ಐ ಭೀಮರಾಯ ಅವರ ಸರ್ವಿಸ್ ರಿವಾಲ್ವರ್ ಒಯ್ದಿದ್ದ ಕಳ್ಳ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 9:10 IST
Last Updated 17 ಜುಲೈ 2023, 9:10 IST
ಖಾಜಪ್ಪ
ಖಾಜಪ್ಪ   

ಅಫಜಲಪುರ (ಕಲಬುರಗಿ ಜಿಲ್ಲೆ): ಪಟ್ಟಣದ ಪಿಎಸ್‌ಐ ಭೀಮರಾಯ ಅವರ ಸರ್ವಿಸ್ ರಿವಾಲ್ವರ್ ಕಿತ್ತುಕೊಂಡು ಹೋಗಿ ಮರದ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ ಆರೋಪಿ ಖಾಜಪ್ಪ ಕೊನೆಗೂ ಮರದಿಂದ ಕೆಳಗಿಳಿದಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ.

ಸುಮಾರು 20ಕ್ಕೂ ಅಧಿಕ ಕಳ್ಳತನದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಖಾಜಪ್ಪನನ್ನು ಹಿಡಿಯಲು ಬೆಂಗಳೂರಿನಿಂದ ಸಿಸಿಬಿ ಪೊಲೀಸರು ಬಂದಿದ್ದರು. ಅವರೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಫಜಲಪುರ ಠಾಣೆ ಪಿಎಸ್‌ಐ ಭೀಮರಾಯ ಬಂಕಲಿ ಅವರ ಸರ್ವಿಸ್ ರಿವಾಲ್ವರನ್ನು ಖಾಜಪ್ಪ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದ ಪೊಲೀಸರು ರಾತ್ರಿಯಿಂದಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿ ಹುಡುಕಾಟ ನಡೆಸಿದ್ದರು.

ಆರೋಪಿಯು ಅಫಜಲಪುರ ಹೊರವಲಯದ ನಿಂಬಾಳ ಎಂಬುವವರ ಹೊಲದಲ್ಲಿನ ಬೃಹತ್ ಬೇವಿನ ಮರವನ್ನು ಏರಿ ಕುಳಿತಿದ್ದ. ಇದನ್ನು ಗಮನಿಸಿದ ಪೊಲೀಸರು ಮರವನ್ನು ಸುತ್ತುವರೆದು ಕೆಳಕ್ಕೆ ಬರುವಂತೆ ತಾಕೀತು ಮಾಡಿದ್ದರು.

ADVERTISEMENT

ಸ್ವತಃ ಎಸ್ಪಿ ಇಶಾ ಪಂತ್ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕೊನೆಗೂ ಮರದಿಂದ ಕೆಳಗಿಳಿದು ಬಂದ ಖಾಜಪ್ಪ ರಿವಾಲ್ವರನ್ನು ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: ಅಫಜಲಪುರ: ಪಿಎಸ್ಐ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಕಳ್ಳ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.