ಶಹಾಬಾದ್: ನಗರದ ಜಿಇ ಮತ್ತು ಜೆಪಿ ಕಂಪನಿಯ ನೊಟಿಫೈಡ್ ಏರಿಯಾ (ಆದಿ ಸೂಚಿತ ಪ್ರದೇಶ)ದ ಸಾರ್ವಜನಿಕರಿಗೆ ಕನಿಷ್ಟ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಮುಖ್ಯಾಧಿಕರಿ ಶೀಲಾ ಅವರಿಗೆ ಶಾಸಕ ಬಸವರಾಜ ಮತ್ತಿಮಡು ತರಾಟೆಗೆ ತೆಗೆದುಕೊಂಡರು.
ಶುಕ್ರವಾರ ಆದಿ ಸೂಚಿತ ಪ್ರದೇಶಕ್ಕೆ ಭೇಟಿ ನೀಡಿದ ಅವರು, ₹3.50ಕೋಟಿ ವೆಚ್ಚದ ಕಾಮಗಾರಿ ಕೈಗೊಂಡಿದ್ದರು ಶೇ 10ರಷ್ಟು ಕಾಮಗಾರಿ ಮಾಡಿಲ್ಲ, ಆದರೇ ಸಂಪೂರ್ಣ ಹಣ ಬಳಕೆ ಮಾಡಲಾಗಿದೆ. ಮೇಲ್ನೋಟಕ್ಕೆ ಕಳಪೆ ಕಾಮಗಾರಿ ನಡೆದಿದ್ದು, ಇದರ ವಿರುದ್ಧ ದಾಖಲೆ ಸಮೇತ ಲೋಕಾಯುಕ್ತರಿಗೆ ದೂರನ್ನು ಸಲ್ಲಿಸುತ್ತೇನೆ ಎಂದರು.
ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಬೀದಿ ದೀಪ ಅಳವಡಿಕೆ ಪರಿಶೀಲಿಸಿದರು. ನಗರ ಸಭೆಯ ದಿನಗೂಲಿ ನೌಕರನೊಬ್ಬ ನೋಟಿಫೈಡ್ ಏರಿಯಾದ ಕಾರ್ಮಿಕರ ಮೇಲೆ ದಬ್ಬಾಳಿಕೆ ಬೆದರಿಕೆ ಹಾಕಿರುವ ಕುರಿತು ಜನರು ದೂರನ್ನು ನೀಡಿದ್ದಾರೆ. ಕೂಡಲೆ ಅವನನ್ನು ಕೆಲಸದಿಂದ ತೆಗೆದುಹಾಕುವಂತೆ ಪೌರಯುಕ್ತ ಕೆ.ಗುರ್ಲಿಂಗಪ್ಪ ಅವರಿಗೆ ಸೂಚಿಸಿದರು.
ಕಾಲೊನಿಯ ಜನರಿಗೆ ಸೌಕರ್ಯ ಒದಗಿಸಲು ಹಣದ ಕೊರತೆಯಿಲ್ಲ. ಈಗಾಗಲೆ ನಡೆಯುತ್ತಿರುವ ಕಾಮಗಾರಿಗಳನ್ನು ಬಿಟ್ಟು 2ಕೋಟಿ ಹಣ ಇದ್ದರೂ ಬಳಸದೆ ಅಧಿಕಾರಿಗಳು ನಿರ್ಲಕ್ಷವಹಿಸಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೂಡಲೆ ಎರಡು ಮೂರು ದಿನದಲ್ಲಿ ಸಮಸ್ಯೆಗಳನ್ನು ಪರಿಹರಿಸದಿದ್ದರೆ ನಿಮ್ಮ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇಲ್ಲಿನ ಶಾಸಕರ ಮಾದರಿ ಕನ್ಯೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ನಿಂಗಣ್ಣ ಹುಳುಗೋಳ್ಕರ, ಅರುಣಕುಮಾರ ಪಟ್ಟಣಕರ, ಬಸವರಾಜ ಬಿರಾದರ, ಸಿದ್ರಾಮ ಕುಸಾಳೆ, ದಿನೇಶ್ ಗೌಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.