ಕಲಬುರ್ಗಿ: ಹೊರಗುತ್ತಿಗೆ ಆಧಾರದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಕಾಯಂ ಮಾಡಿಕೊಳ್ಳಬೇಕು. 6ನೇ ವೇತನ ಆಯೋಗ ಶಿಫಾರಸು ಮಾಡಿದ ವೇತನವನ್ನು 2018ರ ಏಪ್ರಿಲ್ 1ರಿಂದ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಹೈದರಾಬಾದ್ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಬಂದಿದ್ದ ನೌಕರರು ಮಹಾಮಂಡಲದ ಅಧ್ಯಕ್ಷ ಡಾ.ಕೆ.ಎಸ್.ಶರ್ಮಾ ಅವರ ನೇತೃತ್ವದಲ್ಲಿ ನಗರದ ವೀರಶೈವ ಕಲ್ಯಾಣಮಂಟಪದಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಇರುವ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶರ್ಮಾ, ‘ಮಹಾಮಂಡಲ ಸರ್ಕಾರಕ್ಕೆ ಸಲ್ಲಿಸಿರುವ 34 ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಹೊರಗುತ್ತಿಗೆ ನೌಕರರನ್ನು ಯಾವ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು. ಒಂದು ವೇಳೆ ಯಾರನ್ನಾದರೂ ವಜಾ ಮಾಡಿದರೆ ಅವರನ್ನು ಮರುನೇಮಕ ಮಾಡಿಕೊಳ್ಳಬೇಕು. ಪಂಜಾಬ್, ಹಿಮಾಚಲಪ್ರದೇಶ ಹಾಗೂ ಜಮ್ಮು–ಕಾಶ್ಮೀರ ರಾಜ್ಯದಲ್ಲಿ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಲಾಗಿದೆ. ಅದೇ ಮಾದರಿಯನ್ನು ರಾಜ್ಯದಲ್ಲಿಯೂ ಅನುಸರಿಸಬೇಕು. ಹೊರಗುತ್ತಿಗೆ ನೌಕರರಿಗೆ ಶೇ 100ರಷ್ಟು ತುಟ್ಟಿಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ಕೊಡಬೇಕು. ಇವರಿಗೆ ಪಿಂಚಣಿ ಯೋಜನೆಯನ್ನು ಪೂರ್ವಾನ್ವಯವಾಗುವಂತೆ ಜಾರಿಗೆ ತರಬೇಕು. ಗಳಿಕೆ ರಜೆ ನಗದೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಮಹಾಮಂಡಲದ ವಿಭಾಗೀಯ ವಿಭಾಗೀಯ ಸಂಚಾಲಕ ವಿ.ಜಿ. ಅಂಗಡಿ, ವಿವಿಧ ಜಿಲ್ಲೆಗಳ ಮುಖಂಡರಾದ ಅಯೂಬ್, ನೀಲಮ್ಮ, ರೇಣುಕಾ, ಮರಿಯಮ್ಮ, ಲಕ್ಷ್ಮಿ, ಮಹಾವೀರ, ವಿಠ್ಠಲ ಮಾನೆ, ನಾಗಮೂರ್ತಿ, ಸಾಯಬಣ್ಣ, ಸುಭಾಷ್, ಮಲ್ಲಿಕಾರ್ಜುನ ವಾಲಿ, ತಿಮ್ಮೇಗೌಡ, ಈಶಪ್ಪ, ನಬಿ ಮುಲ್ಲಾ, ಎ. ನಾರಾಯಣ, ಶಂಕರ ಗುರು, ಬಸವರಾಜ ಕೋರಿ, ದಾಮೋದರ ಅಲಕಾರಿ, ವೆಂಕಟಸ್ವಾಮಿ, ಪಾಲಪ್ಪ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದೂ ಡಾ.ಕೆ.ಎಸ್.ಶರ್ಮಾ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.