ಸೇಡಂ: ‘ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ವಿರೋಧಿಸಿ ಸೇಡಂನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು,ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪಟ್ಟಣದ ಬಸ್ ನಿಲ್ದಾಣದದಿಂದ ಕಲಬುರ್ಗಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಕಲಬುರ್ಗಿ ವೃತ್ತದ ಬಳಿ 2 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ್ದರಿಂದ ಜನಸಂಚಾರಕ್ಕೆ ತೊಂದರೆ ಉಂಟಾಯಿತು. ಕೆಲವರು ವರ್ತಕರು ಸ್ವಯಂಪ್ರೇರಿತರಾಗಿ ಪ್ರತಿತಭಟನೆಯಲ್ಲಿ ಪಾಲ್ಗೊಂಡಿದ್ದರು. ಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳ ಎಂದಿನಂತೆ ತೆರೆದಿದ್ದವು.
ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ನೋಟು ರದ್ದತಿಯಿಂದಾಗಿ ದೇಶದಲ್ಲಿ ಅನೇಕರಿಗೆ ತೊಂದರೆ ಆಗಿದೆ. ಜನರಿಗೆ ತೊಂದರೆ ಕೊಡುವುದೇ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಾನು ಹೋರಾಟಕ್ಕೆ ಭಯಪಡುವುದಿಲ್ಲ. ನಾನೇ ಮುಂದಾಳತ್ವ ವಹಿಸುತ್ತೇನೆ’ ಎಂದರು.
ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟರಾಮ ರೆಡ್ಡಿ ಕಡತಾಲ್ ಮಾತನಾಡಿ, ‘ಕೇಂದ್ರ ಸರ್ಕಾರ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಕೋಮುವಾದ ಮೂಲಕ ಸಮಾಜದಲ್ಲಿ ಶಾಂತಿ ಕದಡಿಸುವ ಕೆಲಸ ಆಗುತ್ತಿದೆ. ಜನರ ಸಮಸ್ಯೆ ಇತ್ಯರ್ಥಪಡಿಸಬೇಕಾದ ಸರ್ಕಾರ ಜನರಲ್ಲಿ ಧ್ವೇಷ ಸೃಷ್ಟಿಸುವ ಕೆಲಸ ಮಾಡುತ್ತಿದೆ’ ಎಂದರು.
ನಾಗೇಶ್ವರರಾವ ಮಾಲಿಪಾಟೀಲ, ಮುಕ್ರಂಖಾನ್, ಅಬ್ದುಲ್ ಗಫೂರ್, ಸುದರ್ಶನ ರೆಡ್ಡಿ ಪಾಟೀಲ, ಶಾಬೋದ್ದಿನ್ ಹಯ್ಯಾಳ, ಹಾಜಿ ನಾಡೇಪಲ್ಲಿ, ಸತ್ತರ ನಾಡೆಪಲ್ಲಿ, ಸೈಯದ್ ನಾಜೀಮೋದ್ದಿನ್, ಯೂನಸ್ಖಾನ್, ಶೇಖ್ ಆದಾಮ್, ಸಾಜೀದಖಾನ್, ಶಂಭುಲಿಂಗ ನಾಟೀಕಾರ, ವಿಲಾಸ ಗೌತಂ ನಿಡಗುಂದಾ, ಪ್ರಶಾಂತ ಸೇಡಂಕರ್, ಜಗನ್ನಾಥರೆಡ್ಡಿ ಗೋಟುರ, ಅಬ್ದುಲ್ ನಜೀರ್, ಮಂಜುನಾಥ ಗುತ್ತೇದಾರ,ಮಹ್ಮದ್ ಮೌಲಾನ್, ಸದ್ದಾಂ ಕುರಕುಂಟಾ, ಬಸವರಾಜ ಕಾಳಗಿ, ಹಮೀದ್ ಟೇಲರ್, ದಿಲ್ಶಾದ್ ನಿರ್ನಾವಿ, ಜಾವಿದ್ ನಿರ್ನಾವಿ, ಚಾಂದಪಾಶಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.