ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿ ಐವರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಕಲಬುರಗಿಗೆ ಕರೆತಂದರು.
ದಿವ್ಯಾ ಹಾಗರಗಿ ಒಡೆತನದ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಅರ್ಚನಾ, ಸುನಿತಾ, ದಿವ್ಯಾ ಅವರಿಗೆ ಆಶ್ರಯ ನೀಡಿದ್ದ, ಮಹಾರಾಷ್ಟ್ರದ ಸೊಲ್ಲಾಪುರದ ಮರಳು ವ್ಯಾಪಾರಿಗಳಾದ ಸುರೇಶ ಕಾಟೇಗಾಂವ ಹಾಗೂ ಕಾಳಿದಾಸ ಬಂಧಿತರು. ಎಲ್ಲರನ್ನೂ ಗುರುವಾರ ಮಧ್ಯರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಯಿತು ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದರು.
"ಭೀಮಾ ತೀರದ ಮರಳುಗಾರಿಕೆಯಲ್ಲಿ ಸುರೇಶ ಕಾಟೇಗಾಂವ ಅವರ ಹೆಸರು ದೊಡ್ಡದಾಗಿ ಕೇಳಿಬಂದಿತ್ತು. ಈ ಉದ್ಯಮಿ ಜೊತೆ ದಿವ್ಯಾ ಹಾಗೂ ಅವರ ತಂಡಕ್ಕೆ ಹೇಗೆ, ಯಾವಾಗಿನಿಂದ ಸಂಪರ್ಕವಿದೆ ಎಂಬ ಬಗ್ಗೆ ವಿಚಾರಣೆ ನಡೆಸಬೇಕಿದೆ" ಎಂದೂ ಅಧಿಕಾರಿಗಳು "ಪ್ರಜಾವಾಣಿ"ಗೆ ತಿಳಿಸಿದರು.
ಅಕ್ರಮ ನಡೆದ ಕಲಬುರಗಿಯ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ, ಪರೀಕ್ಷಾ ಮೇಲ್ವಿಚಾರಕಿಯಾಗಿ ನಿಯೋಜನೆಗೊಂಡಿದ್ದ ಶಿಕ್ಷಕಿ ಸುನಂದಾ, ಇನ್ನೊಬ್ಬ ಅಭ್ಯರ್ಥಿ ಶಾಂತಿಬಾಯಿ ಇನ್ನೂ ತಲೆಮರೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.