ADVERTISEMENT

ಸಿಂಧನೂರು | ಹಿಂಗಾರು ಜೋಳ: ನೋಂದಣಿಗೆ ಮೀನಮೇಷ

ಡಿ.ಎಚ್.ಕಂಬಳಿ
Published 14 ಏಪ್ರಿಲ್ 2025, 6:34 IST
Last Updated 14 ಏಪ್ರಿಲ್ 2025, 6:34 IST
<div class="paragraphs"><p>ಜೋಳ</p></div>

ಜೋಳ

   

ಸಿಂಧನೂರು: ರೈತರು ಬೆಳೆದ ಹಿಂಗಾರು ಜೋಳ ಖರೀದಿಗಾಗಿ ಮಾರ್ಚ್‌ 28ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶ ಬಂದು 15 ದಿನಗಳಾದರೂ ನಗರದಲ್ಲಿ ಹಿಂಗಾರು ಜೋಳ ಖರೀದಿಗೆ ನೋಂದಣಿ ಆರಂಭವಾಗಿಲ್ಲ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

‘ಹಿಂಗಾರು ಜೋಳ ಕೈಗೆ ಬಂದ ಸಮಯದಲ್ಲಿ ಮುಂಗಾರು ಜೋಳವೆಂದು ನೋಂದಣಿ ಮಾಡಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. 15 ದಿನಗಳಿಂದ ಹಿಂಗಾರು ಜೋಳ ಮಾರಾಟಕ್ಕೆ ನೋಂದಣಿ ಮಾಡಲು ರೈತರು ಅಲೆಯುತ್ತಿದ್ದಾರೆ. ಮೊದಲು ಮುಂಗಾರು ಜೋಳದ ನೋಂದಣಿ ಮುಗಿಯಲಿ, ನಂತರ ಮಾಡಿಕೊಳ್ಳುತ್ತೇವೆ ಎನ್ನುತ್ತ ಮುಂದೂಡುತ್ತಿದ್ದಾರೆ. ಈಗ ಸರ್ವರ್ ನೋಂದಣಿ ತೆಗೆದುಕೊಳ್ಳುತ್ತಿಲ್ಲವೆಂದು ಹೇಳುತ್ತಿದ್ದಾರೆ. ಹೀಗಾದರೆ ನಮ್ಮ ಗತಿ ಏನು’ ಎಂಬುದು ರೈತರಾದ ನಿಂಗಪ್ಪ ಮಾಡಶಿರವಾರ ಹಾಗೂ ಬಸವರಾಜ ಅಲಬನೂರು ಪ್ರಶ್ನೆ.

ADVERTISEMENT

‘ಸರ್ಕಾರ ಕೂಡಲೇ ಜೋಳ ಖರೀದಿಗೆ ನೋಂದಣಿ ಆರಂಭಿಸಬೇಕು. ಖಾಸಗಿ ಗ್ರೇಡ್‍ಗಳನ್ನು ತೆಗೆಯಬೇಕು. ಲಾರಿ ಮತ್ತು ಹಮಾಲರ ಕೊರತೆ ನೀಗಿಸಬೇಕು. ರೈತರಿಂದ ಜೋಳ ಖರೀದಿಸುವ ಮಿತಿಯನ್ನು ಹೆಚ್ಚಿಸಬೇಕು’ ಎಂಬುದು ಅಖಿಲ ಭಾರತ ಕಿಸಾನ್ ಸಭಾ ಸಂಚಾಲಕ ಚಂದ್ರಶೇಖರ ಕ್ಯಾತ್ನಟ್ಟಿ ಒತ್ತಾಯ.

‘ಮಾರ್ಚ್ ತಿಂಗಳಲ್ಲಿ ಹಿಂಗಾರು ಜೋಳ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ರಾಜ್ಯ ಸರ್ಕಾರದ ಆದೇಶವಿದೆ. ಆದರೆ, ನೋಂದಣಿಗೆ ಆದೇಶ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ದ್ವಂದ್ವ ನೀತಿಯನ್ನು ವಿರೋಧಿಸಿ, ಹಿಂಗಾರು ಜೋಳ ನೋಂದಣಿ ಹಾಗೂ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ಏಪ್ರಿಲ್‌ 15ರಂದು ಸಾವಿರಾರು ರೈತರೊಂದಿಗೆ ರಾಗಲಪರ್ವಿ ಕ್ರಾಸ್, ಜವಳಗೇರಾ ಹಾಗೂ ಶ್ರೀಪುರಂ ಜಂಕ್ಷನ್‍ನಲ್ಲಿ ರಸ್ತೆ ಸಂಚಾರ ತಡೆ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನ್‍ಪಾಷಾ ದಿದ್ದಿಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.