ರಾಗಿಣಿ ವೈಜನಾಥ
ಚಿಂಚೋಳಿ: ತಂದೆ ವೈಜನಾಥ ಮದ್ದರಗಿ ಪ್ರಾಥಮಿಕ ಶಾಲೆ ಶಿಕ್ಷಕ, ತಾಯಿ ರೇಖಾ ಗೃಹಿಣಿ. ಯಾವುದೇ ಮನೆ ಪಾಠವಿಲ್ಲದೇ ಹಳ್ಳಿಯಲ್ಲಿಯೇ ನೆಲೆಸಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಗಳಿಸಿದ ಚಿಂಚೋಳಿಯ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ರಾಗಿಣಿ ವೈಜನಾಥ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ತಂದಿದ್ದಾಳೆ.
1ರಿಂದ 10ನೇ ತರಗತಿವರೆಗೆ ವೀರೇಂದ್ರ ಪಾಟೀಲ ಶಾಲೆಯಲ್ಲಿಯೇ ಅಭ್ಯಾಸ ಮಾಡಿದ ರಾಗಿಣಿ ಬೆಳಿಗ್ಗೆ 4.30 ಗಂಟೆಗೆ ಎದ್ದು 7.30ವರೆಗೆ ಓದು ನಂತರ ಶಾಲೆಗೆ ತಯಾರಾಗುವ ಪ್ರಕ್ರಿಯೆ ನಡೆಸಿ ಶಾಲೆಯಿಂದ 5 ಗಂಟೆಗೆ ಮನೆಗೆ ಬಂದು ಮನೆಯಲ್ಲಿ ಶಾಲೆಯ ಹೋಂ ವರ್ಕ್ ಪೂರ್ಣಗೊಳಿಸಿ ಸಂಜೆ ವೇಳೆ 1 ಗಂಟೆ ಮನರಂಜನೆಗಾಗಿ ಟಿವಿ ವೀಕ್ಷಿಸಿ ರಾತ್ರಿ 9.30ರಿಂದ 11 ಗಂಟೆವರೆಗೆ ಓದುವ ಮೂಲಕ ಹೆತ್ತವರಿಗೆ ಹಾಗೂ ತಾಲ್ಲೂಕಿಗೆ ಮೊದಲಿಗಳಾಗಿ ವಿಶೇಷ ಸಾಧನೆ ಮಾಡಿದ್ದಾಳೆ.
‘ನಾನು ಯಾವುದೇ ಟ್ಯೂಷನ್ ಹೋಗಿಲ್ಲ ಶಾಲೆಯಲ್ಲಿ ಶಿಕ್ಷಕರು ಹೇಳಿದ್ದನ್ನೇ ಕೇಳಿ ನಿರಂತರ ಅಧ್ಯಯನ ಮತ್ತು ಮನರಂಜನೆ ಮೂಲಕ ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ್ದೇನೆ. ನನಗೆ 623 ಅಂಕ ಬರುವ ನಿರೀಕ್ಷೆಯಿತ್ತು ಆದರೆ 621 ಅಂಕಗಳು ಬಂದಿವೆ’ ಎಂದು ರಾಗಿಣಿ ವೈಜನಾಥ ಮದ್ದರಗಿ ಪ್ರಜಾವಾಣಿಗೆ ತಿಳಿಸಿದರು.
625ಕ್ಕೆ 621 ಅಂಕಗಳಿಸಿದ ರಾಗಿಣಿ ಗಣಿತ, ವಿಜ್ಞಾನ ಮತ್ತು ಹಿಂದಿಯಲ್ಲಿ ಪ್ರತಿಶತ ಅಂಕ ಪಡೆದರೆ, ಕನ್ನಡ 124, ಸಮಾಜ ವಿಜ್ಞಾನ 99 ಹಾಗೂ ಇಂಗ್ಲೀಷನಲ್ಲಿ 98 ಅಂಕಗಳಿಸಿದ್ದಾಳೆ.
ಚಿಂಚೋಳಿಯ ಹಾರಕೂಡ ಚನ್ನಬಸವೇಶ್ವರ ಶಾಲೆಯ ಬಸವಶ್ರೀ ರಮೇಶ ವೈರಾಗೆ 625ಕ್ಕೆ 616 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಮತ್ತು ತಾಲ್ಲೂಕಿಗೆ ದ್ವೀತಿಯ ಸ್ಥಾನ ಪಡೆದಿದ್ದಾಳೆ. ಬಸವಶ್ರೀ ತಾಯಿ ಗೃಹಿಣಿಯಾದರೆ ತಂದೆ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಸರ್ಕಾರ ಹಲವಾರು ಕ್ರಮ ಕೈಗೊಂಡರು ತಾಲೂಕಿನಲ್ಲಿ ಫಲಿತಾಂಶ ಸುಧಾರಣೆಯಾಗಿಲ್ಲ. ಪರೀಕ್ಷೆ ಬಿಗಿಯಾಗಿ ನಡೆಸಿದಂತೆ ಶಾಲೆಗಳಲ್ಲಿ ಪಾಠ ಬೋಧನೆಯೂ ಬಿಗಿಯಾಗಿ ನಡೆಯುವಂತೆ ಫಲಿತಾಂಶ ಕಡಿಮೆ ಬಂದರೆ ಅದಕ್ಕೆ ಆಯಾ ಶಾಲೆಯ ಶಿಕ್ಷಕರನ್ನೇ ಹೊಣೆ ಮಾಡಿದರೆ ಫಲಿತಾಂಶ ಸುಧಾರಣೆ ಸಾಧ್ಯವಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ ಶಾಲೆಗಳಿಗೆ ಉನ್ನತಾಧಿಕಾರಿಗಳು ನಿರಂತರ ಭೇಟಿ ನೀಡುತ್ತ ಬಂದರೆ ನಿರೀಕ್ಷೆ ಸಾಧ್ಯವಿದೆ ಎನ್ನುತ್ತಾರೆ ಶಿಕ್ಷಣ ಪ್ರೇಮಿ ಬಂಡಪ್ಪ ಹೋಳ್ಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.