ಚಿಂಚೋಳಿ: ಬಡಿಗ, ಅಕ್ಕಸಾಲಿಗ, ಕಂಬಾರ, ಶಿಲ್ಪಿ ಮತ್ತು ಕಂಚುಗಾರ ಇವರೆಲ್ಲರ ಸಮೂಹವಾಗಿರುವ ವಿಶ್ವಕರ್ಮರು ಲಾಕ್ಡೌನ್ನಿಂದ ನಲುಗಿ ಹೋಗಿದ್ದಾರೆ. ಮುಖ್ಯಮಂತ್ರಿಗಳು ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಿ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮೂಲಕ ಸಮುದಾಯಕ್ಕೆ ತಲುಪುವಂತೆ ಮಾಡಬೇಕು ಎಂದು ಇಲ್ಲಿನ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
ವಿಶ್ವಕರ್ಮ ಸಮಾಜದ ಮುಖಂಡ ದೇವೇಂದ್ರ ಪಂಚಾಳ ನೇತೃತ್ವದಲ್ಲಿ ಸಮಾಜದ ಜಗದೀಶ ಚಂದಾಪುರ, ಮಲ್ಲಿಕಾರ್ಜುನ ಚಿಂಚೋಳಿ, ರೇವಣಸಿದ್ದ ರುಸ್ತಂಪುರ, ರಾಜು ಚಿಮ್ಮನಚೋಡ, ಮೋನಪ್ಪ ಚಂದಾಪುರ, ಬಾಬು ಗಾರಂಪಳ್ಳಿ, ರೇವಣಸಿದ್ದ ಈದಲಾಯಿ, ಸುಭಾಷ ಚಿಮ್ಮನಚೋಡ ಮತ್ತು ನರಸಪ್ಪ ಮೊದಲಾದವರು ಈಚೆಗೆ ಇಲ್ಲಿ ಸಭೆ ನಡೆಸಿ ಸಮಾಜದ ಹಿತರಕ್ಷಣೆಗೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಒತ್ತಾಯಿಸಿದ್ದಾರೆ.
ದೊರೆಯದ ಸಹಾಯಧನ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ನೇಕಾರರಿಗೆ ಸರ್ಕಾರ ಘೋಷಿಸಿದ ನೆರವಿನಿಂದ ಚಿಂಚೋಳಿ ತಾಲ್ಲೂಕಿನ ಕಂಬಳಿ ನೇಕಾರರು ವಂಚಿತರಾಗಿದ್ದಾರೆ ಎಂದು ಹಾಲುಮತ ಯುವ ವೇದಿಕೆಯ ಅಧ್ಯಕ್ಷ ಗೋಪಾಲ ಎಂ.ಪಿ ಗಾರಂಪಳ್ಳಿ ತಿಳಿಸಿದ್ದಾರೆ.
ಜವಳಿ ಇಲಾಖೆಯ ಯೋಜನೆಗಳ ಅರಿವಿನ ಕೊರತೆಯಿಂದ ಕಂಬಳಿ ನೇಕಾರರು ₹ 2 ಸಾವಿರ ನೆರವಿನಿಂದ ವಂಚಿತರಾಗಿದ್ದಾರೆ. ಪ್ರಯುಕ್ತ ಇವರಿಗೂ ಪ್ರೋತ್ಸಾಹ ಧನ ನೀಡಬೇಕು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅನುಗ್ರಹ ಯೋಜನೆಯ ಸುತ್ತೋಲೆ ವಾಪಸ್ ಪಡೆದು ಈ ಹಿಂದೆ ಜಾರಿಯಲ್ಲಿದ್ದ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ತಹಶೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ.
ರೇವಣಸಿದ್ದಪ್ಪ ಕೊರಡಂಪಳ್ಳಿ, ಗಿರಿಮಲ್ಲಪ್ಪ ಹಸರಗುಂಡಗಿ, ಸಂತೋಷ ಪೂಜಾರಿ, ಮಲ್ಲಿಕಾರ್ಜುನ ಕೊರಡಂಪಳ್ಳಿ, ಮೌನೇಶ ಮಲ್ಲಿಕರ್ಜುನ ಮತ್ತು ಗುಂಡಪ್ಪ ಎಂ.ಪಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.