ADVERTISEMENT

840 ಕುಟುಂಬಕ್ಕೆ ಮನೆ ನಿರ್ಮಾಣ

ನಿರಾಶ್ರಿತರಿಗೆ ಪುನರ್ವಸತಿ, ನಿವೇಶನ ಅಭಿವೃದ್ಧಿ, ₹ 31.63 ಕೋಟಿ ಬಿಡುಗಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 14:37 IST
Last Updated 30 ಅಕ್ಟೋಬರ್ 2018, 14:37 IST
ಜಗದೀಶ್‌
ಜಗದೀಶ್‌   

ಮಡಿಕೇರಿ: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ನಿರಾಶ್ರಿತ ಕುಟುಂಬಕ್ಕೆ ಮನೆ ನಿರ್ಮಿಸಲು ಜಾಗ ಗುರುತಿಸಲಾಗಿದ್ದು, ತಲಾ 30X40 ಅಡಿ ಅಳತೆ ನಿವೇಶನ ಗುರುತು ಮಾಡುವ ಕಾರ್ಯ ನ. 2ರಿಂದ ಆರಂಭಗೊಳ್ಳಲಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಮಡಿಕೇರಿ ತಾಲ್ಲೂಕಿನ ಕೆ. ನಿಡುಗಣೆ ಗ್ರಾಮದ ಸರ್ವೆ ನಂಬರ್ 1/50ರಲ್ಲಿ 4.60 ಎಕರೆ, ಕೆ. ನಿಡುಗಡೆ ಗ್ರಾಮದ ಸರ್ವೆ ನಂಬರ್ 1/13ರಲ್ಲಿ 11.80 ಎಕರೆ, ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 178/1ರಲ್ಲಿ 4 ಎಕರೆ, ಗಾಳಿಬೀಡು ಗ್ರಾಮದ ಸರ್ವೆ ನಂಬರ್ 103ರಲ್ಲಿ 9.50 ಎಕರೆ, ಗಾಳಿಬೀಡು 99/3ರಲ್ಲಿ 7.50 ಎಕರೆ, ಗಾಳಿಬೀಡು ಗ್ರಾಮದ 100/3ರಲ್ಲಿ 7.40 ಎಕರೆ, ಸಂಪಾಜೆ ಹೋಬಳಿಯ ಮದೆ ಗ್ರಾಮದ 399ರಲ್ಲಿ 11.28 ಎಕರೆ, ಬಿಳಿಗೇರಿ ಗ್ರಾಮದ 347/3ರಲ್ಲಿ 1.88 ಎಕರೆ, ಸಂಪಾಜೆ ಹೋಬಳಿಯ ಬಿಳಿಗೇರಿ 347/3ರಲ್ಲಿ 1.50 ಎಕರೆ, ಸಂಪಾಜೆ 54/1ರಲ್ಲಿ 1.50 ಎಕರೆ, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಜಂಬೂರು 13/1ರಲ್ಲಿ 50 ಎಕರೆ, ಕುಶಾಲನಗರದಲ್ಲಿ ಸರ್ವೆ ನಂಬರ್ 17ರಲ್ಲಿ 1 ಎಕರೆ ಸೇರಿ ಒಟ್ಟು 110 ಎಕರೆ ಪುನರ್ವಸತಿಗೆ ಗುರುತಿಸಲಾಗಿದೆ. ಪ್ರಥಮ ಹಂತದಲ್ಲಿ ಆಯ್ದ ಐದು ಕಡೆಗಳಲ್ಲಿ ನಿವೇಶನ ಅಳತೆ ಗುರುತು ಮಾಡುವ ಕಾರ್ಯವು ನಡೆಯಲಿದೆ ಎಂದು ಜಗದೀಶ್‌ ತಿಳಿಸಿದ್ದಾರೆ.

ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರನ್ನು ಗುರುತಿಸಲು ವೈಯಕ್ತಿಕ ಸರ್ವೆ ಮಾಡಲಾಗಿತ್ತು. ಆಕ್ಷೇಪಣೆಗಳನ್ನೂ ಆಹ್ವಾನಿಸಲಾಗಿತ್ತು. ಆಕ್ಷೇಪಣೆ ಪರಿಶೀಲಿಸಿ ಒಟ್ಟು 840 ನಿರಾಶ್ರಿತ ಕುಟುಂಬ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ

ADVERTISEMENT

ಮಡಿಕೇರಿ ತಾಲ್ಲೂಕಿನಲ್ಲಿ 524, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 205, ಸೋಮವಾರಪೇಟೆ ತಾಲ್ಲೂಕಿನಲ್ಲಿ 88 ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 23 ಕುಟುಂಬಗಳಿಗೆ ಮನೆ ನಿರ್ಮಿಸಬೇಕಿದೆ. ಇವರಲ್ಲಿ 94 ಕುಟುಂಬಗಳು ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಮನೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಮತ್ತು ಬಡಾವಣೆ ಅಭಿವೃದ್ಧಿಗೆ ಒಟ್ಟು 31.63 ಕೋಟಿಗೆ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಥಮ ಹಂತದಲ್ಲಿ 373 ನಿವೇಶನ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಮಾದಾಪುರ ಬಳಿಯ ತೋಟಗಾರಿಕೆ ಇಲಾಖೆಗೆ ಸೇರಿದ 50 ಎಕರೆ ಜಾಗ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಡಾವಣೆ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಪ್ರಸ್ತಾವ ಸಲ್ಲಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.