ಮಡಿಕೇರಿ: ಆರ್ಟಿಸಿಯಲ್ಲಿ ಹೆಸರು ಬದಲಾವಣೆ ಮಾಡಲು ಹಣಕ್ಕೆ ಬೇಡಿಕೆಯಿಟ್ಟು, ಹಣ ಸ್ವೀಕರಿಸುತ್ತಿದ್ದ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಹಾಯಕ ಎಚ್.ಎಸ್.ಮಣಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಗೋವಿಂದರಾಜು ಎಂಬುವರು ಮೃತಪಟ್ಟಿದ್ದರಿಂದ ಅವರ ಹೆಸರನ್ನು ಆರ್.ಟಿ.ಸಿಯಿಂದ ತೆಗೆದು, ಅವರ ಪತ್ನಿ ಹೆಸರನ್ನು ಆರ್ಟಿಸಿಗೆ ಸೇರಿಸಿಕೊಡುವಂತೆ ಪಿರ್ಯಾದುದಾರರೊಬ್ಬರು ಸೂಕ್ತ ದಾಖಲಾತಿ ಜೊತೆಗೆ ಮಡಿಕೇರಿ ತಾಲ್ಲೂಕು ಕಚೇರಿಗೆ 2 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯು ಮರಗೋಡು ಗ್ರಾಮದ ಗ್ರಾಮ ಲೆಕ್ಕಿಗರ ಕಚೇರಿಗೆ ಬಂದಿತ್ತು. ಜ.13ರಂದು ಅರ್ಜಿ ಕುರಿತು ವಿಚಾರಿಸಲು ತೆರಳಿದಾಗ, ಗ್ರಾಮ ಸಹಾಯಕ ಎಚ್.ಎಸ್. ಮಣಿ ₹ 3 ಸಾವಿರ ಹಣ ಕೊಟ್ಟರೆ, ಕೆಲಸ ಮಾಡಿಕೊಡುವುದಾಗಿ ತಿಳಿಸಿದ್ದರು. ಮತ್ತೆ ಮೊಬೈಲ್ ಮೂಲಕ ಕರೆ ಮಾಡಿ ₹ 2,500 ಹಣ ನೀಡಿದರೆ, ಫೈಲ್ ಅನ್ನು ಮುಂದಿನ ಹಂತಕ್ಕೆ ಕಳುಹಿಸುವುದಾಗಿಯೂ ಹೇಳಿದ್ದರು. ಈ ಸಂಬಂಧ ಅಗತ್ಯ ದಾಖಲೆಗಳ ಜೊತೆಗೆ, ದೂರುದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಗುರುವಾರ ನಡೆದ ಎ.ಸಿ.ಬಿ ಕಾರ್ಯಾಚರಣೆಯಲ್ಲಿ ಲಂಚದ ಹಣದ ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಲಂಚದ ಹಣ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.