ಸಾವು
(ಪ್ರಾತಿನಿಧಿಕ ಚಿತ್ರ)
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದರೂ ಗಾಳಿಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಬಿರುಸಿನಿಂದ ಬೀಸುತ್ತಿರುವ ಗಾಳಿಗೆ ಮತ್ತೊಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 2ಕ್ಕೆ ಏರಿದೆ. ಸುಮಾರು 200ಕ್ಕೂ ಅಧಿಕ ವಿದ್ಯುತ್ ಕಂಬಗಳು, 26 ಮನೆಗಳು ಹಾನಿಗೀಡಾಗಿವೆ. ಎಲ್ಲೆಂದರಲ್ಲಿ ಮುರಿದು ಬೀಳುತ್ತಿರುವ ಮರದ ಕೊಂಬೆಗಳು ಜನ ಸಂಚಾರಕ್ಕೆ ಆತಂಕವನ್ನು ತಂದೊಡ್ಡಿವೆ.
ಅಂಗಡಿಗಳ ನಾಮಫಲಕಗಳು ತರಗಲೆಗಳಂತೆ ನೆಲಕ್ಕೆ ಬೀಳುತ್ತಿವೆ. ಕೊಡೆ ಹಿಡಿದೂ ಓಡಾಡುವುದು ಕಷ್ಟ ಎನ್ನಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಗಾಳಿಯ ಆರ್ಭಟದಿಂದಲೇ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯ ಕಾರಣಕ್ಕೆ ಕಳೆದರಡು ದಿನಗಳಿಂದ ರಜೆ ನೀಡಿದ್ದ ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮೇ 28 ರಜೆ ವಿಸ್ತರಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ವಿದ್ಯುತ್ ಕಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಳಿಯ ಹೊಡೆತಕ್ಕೆ ಬೀಳುತ್ತಿರುವುದರಿಂದ ಎಚ್ಚೆತ್ತ ಸೆಸ್ಕ್ ಹೊರ ಜಿಲ್ಲೆಗಳಿಂದ ಸಿಬ್ಬಂದಿಯನ್ನು ಕೊಡಗು ಜಿಲ್ಲೆಗೆ ನಿಯೋಜಿಸಿದೆ. ಒಟ್ಟು 74 ಮಂದಿ ಸಿಬ್ಬಂದಿ ಮೈಸೂರು, ಚಾಮರಾಜನಗರ , ಮಂಡ್ಯ ಜಿಲ್ಲೆಗಳಿಂದ ನಿಯೋಜಿಸಲಾಗಿದೆ. ಇದರಿಂದ ತ್ವರಿತ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗುತ್ತದೆ.
ಕಾವೇರಿ ನದಿ ಸೇರಿದಂತೆ ಹೊಳೆ, ತೊರೆಗಳಲ್ಲಿ ನೀರಿನ ಹರಿವು ಇನ್ನೂ ತಗ್ಗಿಲ್ಲ. ದೋಣಿಕಾಡು ಬಳಿ ಬೋಟ್ವೊಂದನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಮತ್ತೊಂದೆಡೆ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕೆಲವಾರು ಗ್ರಾಮಗಳಿಗೆ ತೆರಳುವ ರಸ್ತೆಗಳಲ್ಲಿ ಇನ್ನೂ ನದಿ ನೀರು ನಿಂತಿದೆ. ಹೀಗಾಗಿ, ಬಳಸು ಮಾರ್ಗದಲ್ಲೆ ಊರು ತಲುಪಬೇಕಾದ ಅನಿವಾರ್ಯತೆಯಲ್ಲಿ ಗ್ರಾಮಸ್ಥರು ಇದ್ದಾರೆ.
ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಭಾಗಮಂಡಲದಲ್ಲೂ ಮಳೆಯ ತೀವ್ರತೆ ಕಡಿಮೆಯಾಗಿದೆ. ಸೋಮವಾರ 22 ಸೆಂ.ಮೀನಷ್ಟು ಮಳೆಯಾಗಿತ್ತು. ಮಂಗಳವಾರ 11 ಸೆಂ.ಮೀ ಆಗಿದೆ. ಇದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ನಿಧಾನವಾಗಿ ಇಳಿಕೆಯಾಗುತ್ತಿದೆ. ಆದರೆ, ಗಾಳಿಯ ರಭಸ ಇನ್ನೂ ತಗ್ಗಿಲ್ಲ.
ಮಡಿಕೇರಿ ನಗರದಲ್ಲಿ ಕೊಂಚ ಮಳೆ ಬಿಡುವು ಕೊಟ್ಟಿದ್ದರಿಂದ ರಾಜ ಕಾಲುವೆ ಸ್ವಚ್ಛಗೊಳಿಸುವುದು ಸೇರಿದಂತೆ ಇತರೆ ಕಾರ್ಯಗಳನ್ನು ನಗರಸಭೆ ನಡೆಸಿದೆ. ಕಾವೇರಿ ಲೇಔಟ್ನಲ್ಲಿರುವ ತೋಡಿನ ಸ್ವಚ್ಛತಾ ಕಾರ್ಯ ಬಿರುಸಿನಿಂದ ನಡೆಯಿತು.
ಜಿಲ್ಲಾಡಳಿತ ಸಹಾಯವಾಣಿಯನ್ನು ಪ್ರಕಟಿಸಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತಹ ನಿಯಂತ್ರಣ ಕಚೇರಿ ತೆರೆದಿದೆ. ಮಳೆ ಮತ್ತು ಗಾಳಿಯಿಂದ ಅಥವಾ ನೈಸರ್ಗಿಕ ವಿಕೋಪದಿಂದ ಬಾಧಿತರಾದವರು ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಿ ನೆರವು ಪಡೆಯಬಹುದಾಗಿದೆ.
ಭಾಗಮಂಡಲ ಹೋಬಳಿ ಪದಕಲ್ಲು ಗ್ರಾಮದ ಭಾಸ್ಕರ ರವರ ಮನೆಯ ಹಿಂಭಾಗದ ಗೋಡೆ ಮಳೆಯಿಂದ ಕುಸಿದು ತೀವ್ರ ಹಾನಿಯಾಗಿದೆ. ಶನಿವಾರಸಂತೆ ಹೋಬಳಿ ಕೋರಲಳ್ಳಿ ಗ್ರಾಮದ ಲಲಿತ ಅವರ ಮನೆ ಮೇಲೆ ಮಳೆ ಗಾಳಿಯಿಂದಾಗಿ ಮರ ಬಿದ್ದಿದ್ದು, ಮನೆಯ 100 ಹೆಂಚುಗಳು ಹಾನಿಯಾಗಿವೆ.
ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಅವರು ಮಳೆ ಹಾನಿಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದರು. ತ್ವರಿತವಾಗಿ ಪರಿಹಾರ ವಿತರಿಸಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.