ವಿರಾಜಪೇಟೆ: ಅಪರೂಪದ ಎರಡು ತಲೆಯ ಹಾವನ್ನು ಸಾಗಿಸುತ್ತಿದ್ದ 5 ಮಂದಿಯನ್ನು ತಾಲ್ಲೂಕಿನ ತಿತಿಮತಿಯ ಚನ್ನಂಗೊಲ್ಲಿಯಲ್ಲಿ ಬಂಧಿಸಿದ ಸಿ.ಐ.ಡಿ ಅರಣ್ಯ ಸಂಚಾರಿ ದಳದ ಪೊಲೀಸರು ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.
ಎರಡು ತಲೆಯ ಹಾವನ್ನು ಸಾಗಿಸುತ್ತಿದ್ದ ಆಂಧ್ರದ ಐವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ ಎಲ್ಲರನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಆಂಧ್ರ ಪ್ರದೇಶದಿಂದ ಕೇರಳ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕಾರನ್ನು ಸಿ.ಐ.ಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬುಧವಾರ ಶೋಧಿಸಿದಾಗ ಕಪ್ಪು ಬಿಳಿ ಬಣ್ಣದ ಎರಡು ತಲೆ ಹಾವು ಪತ್ತೆಯಾಗಿದೆ. ಕಾರಿನಲ್ಲಿದ್ದ ಮುಲ್ಲಾ ಮೆಹಬೂಬ್ ವಲಿ, ಶೇಕ್ ಮುಲ್ಲಾ ಚಾಂದ್ ಪಾಶ, ಎಸ್.ಫಯಾಜ್, ಬೋಯಿ ರಂಗಸ್ವಾಮಿ, ಶೇಕ್ ಮೆಹಬೂಬ್ ಪಾಶ ಎಂಬುವರನ್ನು ಬಂಧಿಸಿದ್ದಾರೆ.
ಮಡಿಕೇರಿ ಅರಣ್ಯ ಸಂಚಾರಿ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಸಿಬ್ಬಂದಿ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಎಂ.ಬಿ.ಗಣೇಶ್, ಪಿ.ಬಿ.ಮೊಣ್ಣಪ್ಪ ಹಾಗೂ ಸಿ.ಎಂ.ರೇವಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಗಳು ಬೆಂಗಳೂರಿನಲ್ಲಿ ಎರಡು ತಲೆ ಹಾವು ಖರೀದಿಸುವ ಗಿರಾಕಿಯನ್ನು ಗೊತ್ತುಪಡಿಸಿದ ನಂತರ ಹಾವನ್ನು ಆಂಧ್ರದಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದರೆಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಎರಡು ತಲೆ ಹಾವನ್ನು ಮನೆಯಲ್ಲಿ ಸಾಕುವುದರಿಂದ ಸಂಪತ್ತು ದುಪ್ಪಟ್ಟುಗೊಳ್ಳುತ್ತದೆ ಎಂಬ ನಂಬಿಕೆಯಿಂದ ದುಬಾರಿ ಬೆಲೆಗೆ ಒಂದು ವರ್ಗವು ಈ ಹಾವನ್ನು ಖರೀದಿಸುತಿರುವುದಾಗಿ ತಿಳಿದು ಬಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಎರಡು ತಲೆ ಹಾವಿಗೆ ಸುಮಾರು ಎರಡು ಕೋಟಿ ಮೌಲ್ಯವಿದೆ ಎಂದು ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.