ಮಡಿಕೇರಿ: ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಬಹಿರಂಗ ಸಭೆಗಳಲ್ಲಿ ವ್ಯವಸ್ಥಿತವಾಗಿ ಕಿಸೆಗಳ್ಳತನ ಮಾಡುತ್ತಿದ್ದ ತಂಡವೊಂದನ್ನು ಸೋಮವಾರಪೇಟೆ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಭದ್ರಾವತಿ ಮತ್ತು ಬೆಂಗಳೂರಿನ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ ₹ 65,960 ನಗದು, 12 ಮೊಬೈಲ್ ಫೋನ್ಗಳು ಹಾಗೂ 2 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನಿವಾಸಿಗಳಾದ ಜಯಣ್ಣ (38), ಪುಟ್ಟರಾಜು (39), ಸಿ.ನಾಗರಾಜ (43), ಆರ್.ವೆಂಕಟೇಶ (44), ರಾಮು (43), ಉಮೇಶ್ (36), ಜಯಣ್ಣ (53), ಬೋಜಪ್ಪ (50), ಮೆಹಬೂಬ್ ಸುಭಾನ್ (48), ಡಿ.ಗಿರೀಶ (31), ಬಾಲು (35), ಬೆಂಗಳೂರಿನ ಹೆಬ್ಬಗೋಡಿಯ ಹರೀಶ್ (35), ನೆಲಮಂಗಲದ ರಂಗಣ್ಣ (50) ಬಂಧಿತ ಆರೋಪಿಗಳು.
ಆರೋಪಿಗಳು ಮಡಿಕೇರಿ ನಗರ ಮತ್ತು ಕುಶಾಲನಗರ ಪಟ್ಟಣದಲ್ಲಿ ಈಚೆಗೆ ನಡೆದಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಕಿಸೆಗಳಿಂದ ₹ 1.96 ಲಕ್ಷ ನಗದು ಕಳವು ಮಾಡಿದ್ದರು. ಬಿಜೆಪಿಯ ಹಿರಿಯ ನಾಯಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಕೂಡ ಹಣ ಕಳೆದುಕೊಂಡಿದ್ದರು.
ರಾಜ್ಯದಲ್ಲಿ ರಾಜಕೀಯ ಸಮಾವೇಶಗಳು ನಡೆಯುವ ಊರುಗಳಿಗೆ ಆರೋಪಿಗಳು ಬಾಡಿಗೆ ಕಾರುಗಳಲ್ಲಿ ತೆರಳುತ್ತಿದ್ದರು. 13 ಆರೋಪಿಗಳೂ ಸಾರ್ವಜನಿಕರು, ಕಾರ್ಯಕರ್ತರಂತೆ ಮುಖಂಡರ ಸುತ್ತ ಸೇರುತ್ತಿದ್ದರು. ಕೃತಕವಾಗಿ ತಳ್ಳಾಟ, ನೂಕಾಟಗಳನ್ನು ಮಾಡಿ ಕಿಸೆಗಳಿಂದ ಸುಲಭವಾಗಿ ಹಣ ಕದಿಯುತ್ತಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಇನ್ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಸಬ್ಇನ್ಸ್ಪೆಕ್ಟರ್ ಬಿ.ಎಸ್.ಉಮಾ ಅವರನ್ನು ಒಳಗೊಂಡ ವಿಶೇಷ ತಂಡವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ರಚಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.