
ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಮುಖಮಂಟಪ (ತೀರ್ಥಮಂಟಪ)
ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮುಖ ಮಂಟಪ(ತೀರ್ಥ ಮಂಟಪ) ಉದ್ಘಾಟನೆ ಸಮಾರಂಭವು ಡಿ.24ರಿಂದ 27ರವರೆಗೆ ನಡೆಯಲಿದೆ.
ಡಿ.24ರಂದು ಸಂಜೆ 6ಕ್ಕೆ ಕೇರಳದ ತಳಿಪರಂಬ ಕಾಳೇಘಾಟ್ ಇಲ್ಲಂ ಮಧುಸೂದನ್ ತಂತ್ರಿ ಅವರ ನೇತೃತ್ವದಲ್ಲಿ ಪ್ರಾಶಬ್ಧ ಶುದ್ಧಿ, ರಾಕ್ಷೋಘ್ನ ಹೋಮ ಹಾಗೂ ಮುಖ ಮಂಟಪ ಸರ್ಮಪಣೆ, ರಾತ್ರಿ 8ಕ್ಕೆ ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಅತ್ತಾಯ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಡಿ.25ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, 8ಕ್ಕೆ ಕಳಸಪೂಜೆ, 10ಕ್ಕೆ ದುರ್ಗಾಲಕ್ಷ್ಮಿಗೆ ಕಲಶಾಭಿಷೇಕ, 11ಕ್ಕೆ ಅಯ್ಯಪ್ಪ ಸ್ವಾಮಿಗೆ ದ್ರವ್ಯ ಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ದುರ್ಗಾ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಪ್ರಯುಕ್ತ ವೈದಿಕ ಧಾರ್ಮಿಕ, ವಿಧಿ ವಿಧಾನ ಕಾರ್ಯಕ್ರಮಗಳೂ ನಡೆಯಲಿದೆ.
ಡಿ.27ರಂದು ಮಂಡಲ ಪೂಜೆ: ಕ್ಷೇತ್ರದಿಂದ ಡಿ.27ರಂದು ಮಂಡಲಪೂಜೆ ನಡೆಯಲಿದೆ. ಬೆಳಿಗ್ಗೆ 6.45ಕ್ಕೆ ಗಣಪತಿ ಹೋಮ, 7.10ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, 7.30ಕ್ಕೆ ಚಂಡೆಮೇಳ, 9ಕ್ಕೆ ಅಯ್ಯಪ್ಪಸ್ವಾಮಿಗೆ ಪಂಚಾಮೃತಾಭಿಷೇಕ, 11.30ಕ್ಕೆ ಲಕ್ಷಾರ್ಚನೆ, 12.30ಕ್ಕೆ ಪಲ್ಲಪೂಜೆ, 1ಕ್ಕೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 1ರಿಂದ 4ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಕ್ಷೇತ್ರದಲ್ಲಿ ವಿಶೇಷ ದೀಪಾರಾಧನೆ, ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಲಿದೆ. ಪ್ರಸಾದ ವಿನಿಯೋಗವೂ ನಡೆಯಲಿದೆ ಎಂದು ಅಧ್ಯಕ್ಷ ಬಿ.ಎಂ.ಸುರೇಶ್, ಕಾರ್ಯದರ್ಶಿ ಎಂ.ಚಂದ್ರ ತಿಳಿಸಿದ್ದಾರೆ.
₹18 ಲಕ್ಷ ವೆಚ್ಚದಲ್ಲಿ ನಿರ್ಮಾಣ
‘ಕ್ಷೇತ್ರದಲ್ಲಿ ತೀರ್ಥ ಮಂಟಪದ ಅವಶ್ಯಕತೆಯನ್ನು ಮನಗಂಡು ಊರಿನ ದಾನಿಗಳು, ಸಾರ್ವಜನಿಕರಿಂದ ಸಂಗ್ರಹಿಸಿದ ಸುಮಾರು ₹18 ಲಕ್ಷ ವೆಚ್ಚದಲ್ಲಿ ಮುಖಮಂಟಪದ ನಿರ್ಮಾಣ ಮಾಡಲಾಗಿದೆ’ ಎಂದು ಶ್ರೀಕ್ಷೇತ್ರ ಅಯ್ಯಪ್ಪ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ತಿಳಿಸಿದರು.
‘6 ತಿಂಗಳ ಹಿಂದೆ ಪುತ್ತೂರಿನ ಜಗನಿವಾಸ್ ರಾವ್ ಅವರು ಮಂಟಪ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಪುತ್ತೂರಿನ ಶಿಲ್ಪಿ ಕೃಷ್ಣಪ್ರಸಾದ್ ಅವರು ಬಲು ಸುಂದರವಾಗಿ ನಿರ್ಮಾಣ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲ ಭಕ್ತರು, ದಾನಿಗಳು ನಿತ್ಯವೂ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.