
ನಾಪೋಕ್ಲು: ಸಮೀಪದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಕುಲಾಲರ(ಕುಂಬಾರ) ಸಂಘದ ಯುವ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಕೊಡಗು ಜಿಲ್ಲಾ ಕುಲಾಲರ (ಕುಂಬಾರ) ಚಾಂಪಿಯನ್ಸ್ ಟ್ರೋಫಿ ಸೀಸನ್ 1 ಕ್ರಿಕೆಟ್ ಟೂರ್ನಿಯಲ್ಲಿ ಮಡಿಕೆಬೀಡುವಿನ ಕುಲಾಲ ಕುಂಬಾರ ಬಳಗ ಪ್ರಶಸ್ತಿ ಗೆದ್ದುಕೊಂಡಿತು.
ವಿಜೇತ ತಂಡಕ್ಕೆ ₹20,000 ನಗದು ಹಾಗೂ ಟ್ರೋಫಿ ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ಕುಂಬಾರ ರಾಕರ್ಸ್ ತಂಡಕ್ಕೆ ₹15,000 ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ತೃತೀಯ ಸ್ಥಾನ ಪಡೆದ ಮಡಿಕೇರಿಯ ಕುಲಾಲ ಬ್ರದರ್ಸ್ 11 ತಂಡ ₹5,000 ನಗದು ಹಾಗೂ ಟ್ರೋಫಿ ಪಡೆಯಿತು. ಮೂರ್ನಾಡಿನ ಟೀಮ್ ಶ್ರೀದೇವಿ ತಂಡ ನಾಲ್ಕನೇ ಸ್ಥಾನ ಪಡೆಯಿತು.
ದುರ್ಗಾ ಪ್ರಸಾದ್ (ಸರಣಿ ಶ್ರೇಷ್ಠ), ಹೇಮಂತ್ (ಉದಯೋನ್ಮುಖ ಆಟಗಾರ), ದಿಲೀಪ್ ಕುಲಾಲ್ (ಉತ್ತಮ ಬೌಲರ್), ಯಶಸ್ (ಪಂದ್ಯ ಶ್ರೇಷ್ಠ), ಅಭಿಷೇಕ್ ಕುಲಾಲ್ ( ಅತಿ ಹೆಚ್ಚು ಸಿಕ್ಸರ್) ಪ್ರಸಾದ್ (ಉತ್ತಮ ಕ್ಷೇತ್ರ ರಕ್ಷಕ) ವೈಯಕ್ತಿಕ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಕೆ. ಕುಶಾಲಪ್ಪ ಮೂಲ್ಯ ಮಾತನಾಡಿ, ಜಿಲ್ಲೆಯಲ್ಲಿ ಕುಲಾಲ ಕುಂಬಾರ ಸಂಘವು ಮನೆಮಾತಾಗಿದೆ. ಮುಂದಿನ ದಿನಗಳಲ್ಲಿ ಕುಲಬಾಂಧವರು ಇನ್ನಷ್ಟು ಸಂಖ್ಯೆಯಲ್ಲಿ ಸಂಘದ ಸದಸ್ಯತ್ವ ಪಡೆದುಕೊಂಡು ಸಂಘದ ಏಳಿಗೆಗೆ ಸಹಕರಿಸಬೇಕು ಎಂದರು.
ಯುಪಿಎಸ್ಸಿ ಪರೀಕ್ಷೆ ಬರೆಯುವ ಕುಲಾಲರ ಸಮಾಜದ ಆಸಕ್ತರಿಗೆ ವೈಯಕ್ತಿಕವಾಗಿ ₹25,000 ನೀಡುವುದಾಗಿ ಹೇಳಿದರು.
ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್ ಕುಲಾಲ್ ಮೂರ್ನಾಡು ಮಾತನಾಡಿ, ಕಾರ್ಯಕ್ರಮದ ಯಶಸ್ಸಿನ ಹಿಂದೆ ಯುವ ಘಟಕದ ಸದಸ್ಯರ ಶ್ರಮ ಬಹಳಷ್ಟು ಇದೆ. ಸಮಾಜ ಬಾಂಧವರ ಪೂರಕ ಸಹಕಾರದಿಂದ ಅದ್ದೂರಿ ಕಾರ್ಯಕ್ರಮ ನಡೆಯಲು ಸಹಕಾರಿಯಾಯಿತು ಎಂದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷೆ ಮುತ್ತಮ್ಮ ಕೋಟಿ ಮಾತನಾಡಿ, ಸಂಘಟನೆಯಾದಾಗ ಮಾತ್ರ ಸಮಾಜದಲ್ಲಿ ನಾವು ಗುರುತಿಸಿಕೊಳ್ಳಲು ಸಾಧ್ಯ. ಆ ಮೂಲಕ ಜನಾಂಗದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಬೇಕಿದೆ ಎಂದರು.
ವಿರಾಜಪೇಟೆ ಜೀವವಿಮಾ ನಿಗಮದ ಮ್ಯಾನೇಜರ್ ಮಧುಸೂದನ, ಉಪಾಧ್ಯಕ್ಷ ಕೆ.ಕೆ. ದಾಮೋದರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಖಜಾಂಚಿ ಗಿರೀಶ್ ಮಡಿಕೆಬೀಡು, ಕ್ರೀಡಾ ಸಮಿತಿ ಅಧ್ಯಕ್ಷ, ಶಾಂತಕುಮಾರ್ ಕೆ.ಡಿ., ಚೇರಂಬಾಣೆ ಅರುಣ ಪಿಯು ಕಾಲೇಜು ಪ್ರಾಂಶುಪಾಲ ರಮೇಶ್ ಕೆ. ಆರ್., ಮಂಗಳೂರು ಪಾಂಡೇಶ್ವರ ಎಎಸ್ ಐ ಚಂದ್ರಶೇಖರ್, ಪದಾಧಿಕಾರಿಗಳಾದ ಎಂ.ಡಿ. ಸುರೇಶ್ ಕುಲಾಲ್, ಉದ್ಯಮಿಗಳಾದ ಪೂವಯ್ಯ, ಲಕ್ಷ್ಮಣ್, ತಮ್ಮಯ್ಯ , ರಮೇಶ್, ಮನು ಚಂಗಪ್ಪ, ಜಿಲ್ಲಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳು ಇದ್ದರು. ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿ, ಪವನ್ ಕುಲಾಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.