ಸೋಮವಾರಪೇಟೆ: ‘ತಾಲ್ಲೂಕಿನಲ್ಲಿ ನಿರಂತರವಾಗಿ ಅಕ್ರಮ ಗೋವು ಸಾಗಣೆ, ಗೋವುಕಳ್ಳತನ, ಗೋವು ಹತ್ಯೆ, ಗೋಮಾಂಸ ಮಾರಾಟ ಹೆಚ್ಚಾಗಿದ್ದು, ಇದನ್ನು ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ’ ಎಂದು ಆರೋಪಿಸಿದ ಹಿಂದೂ ಜಾಗರಣ ವೇದಿಕೆ ಸದಸ್ಯರು ಪಟ್ಟಣದ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಈಚೆಗೆ ಕಾಗಡೀಕಟ್ಟೆ ಸಮೀಪ ಗೋವು ಸಾಗಣೆ ಮಾಡುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಮೂವರಿಗೆ ಗಾಯವಗಿತ್ತು. ಕಳ್ಳರ ಬೆಂಗಾವಲಿಗಿದ್ದ ವಾಹನದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ, ಇದುವರೆಗೆ ಅವರನ್ನು ಬಂಧಿಸಿಲ್ಲ. ಪ್ರಕರಣದ ನಿಜವಾದ ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ, ಸೋಮವಾರಪೇಟೆ ಬಂದ್ಗೆ ಕರೆ ನೀಡುವುದಾಗಿ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಎಚ್ಚರಿಸಿದರು. ಪಟ್ಟಣದ ಸುತ್ತ ರಾತ್ರಿ ಪೊಲೀಸ್ ಗಸ್ತು ಇದ್ದರೂ ವಾಹನಗಳಲ್ಲಿ ಅಕ್ರಮ ಗೋವು ಸಾಗಣೆ ನಡೆಯುತ್ತಿದೆ ’ ಎಂದು ದೂರಿದರು.
‘ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಿಂದೂ ಪರ ಹೋರಾಟಗಾರರನ್ನು ಅಪರಾಧಿಗಳನ್ನು ನೋಡುವ ಹಾಗೆ ನೋಡಲಾಗುತ್ತಿದೆ. ಕನಿಷ್ಠ ಸೌಜನ್ಯಕ್ಕಾದರೂ ಕುಳಿತುಕೊಳ್ಳಿ ಎಂದು ಹೇಳುತ್ತಿಲ್ಲ ’ ಎಂದು ಇನ್ಸ್ಪೆಕ್ಟರ್ ವಿರುದ್ಧ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಹೊರ ರಾಜ್ಯದ ಕಾರ್ಮಿಕರ ಆಧಾರ ಕಾರ್ಡ್ಗಳನ್ನು ಪೊಲೀಸ್ ಇಲಾಖೆ ಆ್ಯಪ್ ಮೂಲಕ ಪರಿಶೀಲನೆ ನಡೆಸಿ ನಕಲಿ ಕಾರ್ಡ್ಗಳ ಪತ್ತೆಹಚ್ಚಲಾಗುತ್ತಿದೆ. ಪಟ್ಟಣದಲ್ಲಿ ಅನುಮಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಇನ್ಸ್ಪೆಕ್ಟರ್ ಮುದ್ದು ಮಹಾದೇವ ಹೇಳಿದರು.
ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುವ ವಾಹನ ಅಪಘಾತವಾಗಿದ್ದು, ಅದರಲ್ಲಿದ್ದ ಒಬ್ಬ ಆರೋಪಿಯನ್ನು ಈಗಾಗಲೇ ಬಂಧಿಸಿ, ಮೊಕದ್ದಮೆ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬೆಂಗಾವಲಿಗಿದ್ದ ವಾಹನನ್ನೂ ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ವೇದಿಕೆ ಪ್ರಾಂತ ಕಾರ್ಯಕಾರಣಿ ಸುನಿಲ್ ಮಾದಾಪುರ, ಸಹ ಸಂಯೋಜಕರಾದ ಕುಮಾರ್ ಮೇಕೇರಿ, ಶರತ್ ಪೊನ್ನಂಪೇಟೆ, ಯೋಗೇಶ್ ವಿರಾಜಪೇಟೆ, ತಾಲ್ಲೂಕು ಸಂಯೋಜಕ ಎಂ.ಉಮೇಶ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಪರಮೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.