ವಿರಾಜಪೇಟೆ: ಸಮೀಪದ ಕದನೂರು ಗ್ರಾಮದ ಭಗವತಿ ದೇವಾಲಯದಲ್ಲಿ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಪಟ್ಟಣದ ಟಿ.ಕಾರ್ತಿಕ್ ಬಂಧಿತ ಆರೋಪಿ. ಈತ ಕಳವು ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿ, ಅನುಭವಿಸಿ ಜೈಲಿನಿಂದ ಹೊರಬಂದ ದಿನವೇ ಮತ್ತೆ ತನ್ನ ಕೈಚಳಕ ತೋರಿದ್ದನು.
ಮಾರ್ಚ್ 19 ರಂದು ರಾತ್ರಿ ಕದನೂರು ಗ್ರಾಮದ ಭಗವತಿ ದೇವಾಲಯದ ಭಂಡಾರವನ್ನು ಕಬ್ಬಿಣದ ಸಲಾಕೆಯಿಂದ ಒಡೆದು ಕಳ್ಳತನ ಮಾಡಲಾಗಿದೆ ಎಂದು ದೇವಾಲದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಕೆ. ಪ್ರಶಾಂತ್ ಅವರು ವಿರಾಜಪೇಟೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಸಂಶಯದ ಮೇಲೆ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಈ ಹಿಂದೆ ಅಮ್ಮತ್ತಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿ ಜೈಲುವಾಸ ಅನುಭವಿಸಿ ಮಾರ್ಚ್ 19 ರ ಬೆಳಿಗ್ಗೆಯಷ್ಟೇ ಜೈಲಿನಿಂದ ಬಿಡುಗಡೆಯಗಿ ಬಂದಿದ್ದ ಎಂದು ತಿಳಿದುಬಂದಿದೆ. ಅದೇ ದಿನ ರಾತ್ರಿ ಮತ್ತೊಂದು ಕಳ್ಳತನ ನಡೆಸಿ ಸಿಕ್ಕಿಬಿದ್ದಿರುವುದು ಅಚ್ಚರಿ ಮೂಡಿಸಿದೆ.
ಪೊಲೀಸರು ಆರೋಪಿಯಿಂದ ಮೊಬೈಲ್ ಫೋನ್ ಹಾಗೂ ₹ 700 ನಗದು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಹಾಗೂ ಸಿಪಿಐ ಶ್ರೀಧರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಸಿದ್ದಲಿಂಗ ಬಾಣಸೆ, ಎ.ಎಸ್.ಐ. ಶ್ರೀಧರ್, ಸಿಬ್ಬಂದಿ ತೀರ್ಥಕುಮಾರ್, ನೆಹರುಕುಮಾರ್ ಹಾಗೂ ಪ್ರದೀಪ್ ಕಾರ್ಯಾಚರಣೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.