ADVERTISEMENT

ಕೊಡಗು: ಜಿಲ್ಲೆಗೆ ಬಂತು ಮಾದಕವಸ್ತು ಮುಕ್ತ ಕರ್ನಾಟಕ ಅಭಿಯಾನ

ಮಡಿಕೇರಿ, ಸಂಪಾಜೆಯಲ್ಲಿ ಜನಜಾಗೃತಿ ಮೂಡಿಸಿ, ಪೆರಾಜೆ ತಲುಪಿದ ರಥ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:01 IST
Last Updated 20 ಡಿಸೆಂಬರ್ 2025, 5:01 IST
ಮಡಿಕೇರಿಗೆ ಶುಕ್ರವಾರ ಮಾದಕ ವಸ್ತು ಮುಕ್ತ ಕರ್ನಾಟಕ ಜನಜಾಗೃತಿ ಅಭಿಯಾನದ ರಥಯಾತ್ರೆ ಆಗಮಿಸಿ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ಅಪಾಯಗಳ ಕುರಿತು ಅರಿವು ಮೂಡಿಸಿತು
ಮಡಿಕೇರಿಗೆ ಶುಕ್ರವಾರ ಮಾದಕ ವಸ್ತು ಮುಕ್ತ ಕರ್ನಾಟಕ ಜನಜಾಗೃತಿ ಅಭಿಯಾನದ ರಥಯಾತ್ರೆ ಆಗಮಿಸಿ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ಅಪಾಯಗಳ ಕುರಿತು ಅರಿವು ಮೂಡಿಸಿತು   

ಮಡಿಕೇರಿ: ಕೊಡಗು ಜಿಲ್ಲೆಗೆ ಶುಕ್ರವಾರ ಆಗಮಿಸಿದ ಪರಿವರ್ತನಾ ಟ್ರಸ್ಟ್‌ ವತಿಯಿಂದ ನಡೆಯುತ್ತಿರುವ ಮಾದಕವಸ್ತು ಮುಕ್ತ ಕರ್ನಾಟಕ ಜನಜಾಗೃತಿ ಅಭಿಯಾನದ ರಥಯಾತ್ರೆಯಲ್ಲಿ ನಡೆದ  ಮಾದಕವಸ್ತುಗಳ ಸೇವನೆಯಿಂದಾಗುವ ದುಷ್ಪರಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಸರಿ ಸುಮಾರು ಸಾವಿರದಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು. ಮಾತ್ರವಲ್ಲ, ಮಾದಕವಸ್ತು ಬಳಸುವುದಿಲ್ಲ ಎಂಬ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕೆಲವೆಡೆ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಯಿತು.

ಮೊದಲಿಗೆ ಇಲ್ಲಿನ ಗೌಡ ಸಮಾಜದ ಆವರಣಕ್ಕೆ ಈ ರಥಯಾತ್ರೆಯಲ್ಲಿ ಪರಿವರ್ತನ ಟ್ರಸ್ಟ್‌ನ ಸಂದೇಶ್ ಅವರು ಮಾದಕವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.

ನಂತರ, ಇಲ್ಲಿನ ಜೂನಿಯರ್ ಕಾಲೇಜಿನ ಆವರಣದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿ ಮಾದಕವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು. ಮಾತ್ರವಲ್ಲ, ಡಾ.ಸತೀಶ್‌ಕುಮಾರ್ ಮತ್ತು ಅವರ ತಂಡವು ಮಾಹಿತಿ ನೀಡಿತು. ಇಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾದರು.

ADVERTISEMENT

ಮುಂದೆ ಗಾಂಧಿ ಮೈದಾನ ತಲುಪಿದ ರಥಯಾತ್ರೆಯು ಅಲ್ಲಿ ಸ್ವಲ್ಪ ಕಾಲ ನಿಂತಿತ್ತು. ಪರಿವರ್ತನಾ ಟ್ರಸ್ಟ್ ಸದಸ್ಯರು ಸಮೀಪದ ಸಂತ ಮೈಕಲರ ಶಾಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ಮಾತನಾಡಿದರು. ಮುಖ್ಯವಾಗಿ ಇಲ್ಲಿ ಧನಂಜಯ ಅಗೋಳಿಕಜೆ ಅವರು ಮಾದಕವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು.

ಮುಂದೆ ರಥಯಾತ್ರೆಯು ಸಂಪಾಜೆ ಜೂನಿಯರ್ ಕಾಲೇಜು ನಂತರ, ಪೆರಾಜೆ ತಲುಪಿತು.

ಈ ರಥಯಾತ್ರೆಯಲ್ಲಿ ಟ್ರಸ್ಟ್‌ನ ಕುಮಾರ್, ಅಜಿತ್, ತಿಮ್ಮಯ್ಯ, ಭವನ್, ಬಾಲಕೃಷ್ಣ ರೈ, ಸತೀಶ್, ಚಂದ್ರಶೇಖರ ರೈ ಭಾಗಹಿಸಿದ್ದರು.

ಮಡಿಕೇರಿಗೆ ಶುಕ್ರವಾರ ಬಂದ ಮಾದಕವಸ್ತು ಮುಕ್ತ ಕರ್ನಾಟಕ ಜನಜಾಗೃತಿ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾದರು