ADVERTISEMENT

ಕೊಡಗು: ಕಾಡಾನೆ ದಾಳಿಗೆ ವ್ಯಕ್ತಿ ಸಾವು, ಮತ್ತೊಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 12:49 IST
Last Updated 8 ಜುಲೈ 2025, 12:49 IST
ಆನೆ ದಾಳಿ–ಸಾಂದರ್ಭಿಕ ಚಿತ್ರ
ಆನೆ ದಾಳಿ–ಸಾಂದರ್ಭಿಕ ಚಿತ್ರ   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದ ರುದ್ರಬೀಡು ಗ್ರಾಮದಲ್ಲಿ ಮಂಗಳವಾರ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅಜೇಶ್ (40) ಎಂಬುವವರು ಗಾಯಗೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

‘ಮೊದಲಿಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಅಜೇಶ್‌ ಮೇಲೆ ಆನೆ ಎರಗಿದೆ. ಗಾಯಗೊಂಡ ಅವರು ದೂರ ಓಡಿ ತಪ್ಪಿಸಿಕೊಂಡರು. ನಂತರ, ಸಮೀಪದಲ್ಲೇ ಗಡ್ಡಧಾರಿ ವ್ಯಕ್ತಿಯೊಬ್ಬರು ನಡೆಯುತ್ತ ಹೋಗುತ್ತಿದ್ದರು. ಇವರನ್ನು ನೆಲಕ್ಕೆ ಬೀಳಿಸಿದ ಕಾಡಾನೆ ದಾಳಿ ನಡೆಸಿತು. ಇದರಿಂದ ಅವರು ಸ್ಥಳದಲ್ಲೆ ಮೃತಪಟ್ಟರು. ಅಂದಾಜು 45 ವರ್ಷದವರಾಗಿರುವ ಅವರು ಸ್ಥಳೀಯರಿಗೆ ಇವರು ಪರಿಚಿತಲ್ಲ. ಕಳೆದ 2–3 ದಿನಗಳಿಂದ ಇಲ್ಲಿ ಇವರು ಕಾಣಿಸಿಕೊಂಡಿದ್ದು, ಬಸ್‌ನಿಲ್ದಾಣದಲ್ಲಿ ಮಲಗುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಇವರ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ತಪ್ಪಿಸಿಕೊಂಡ ಅಜೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಗಂಗಾಧರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಒಟ್ಟು 3 ಕಾಡಾನೆಗಳು ಪತ್ತೆಯಾಗಿವೆ. ಇವುಗಳ ಪೈಕಿ ಯಾವ ಕಾಡಾನೆ ದಾಳಿ ನಡೆಸಿತೆಂದು ಗೊತ್ತಾಗಿಲ್ಲ. ಈ ಮೂರೂ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆದಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.