
ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದೆ. ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ಕೊಕ್ಕಲೆಮಾಡ ದಾದಾ ಸೋಮಯ್ಯ ಎಂಬುವವರಿಗೆ ಸೇರಿದ ಗಬ್ಬದ ಹಸು ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿದೆ. ದಾದಾ ಸೋಮಯ್ಯ ಪಾರಾಗಿದ್ದಾರೆ.
ದಾದಾ ಸೋಮಯ್ಯ ರಾಸುಗಳನ್ನು ಮೇಯಿಸಲು ಗದ್ದೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಹುಲಿ ಏಕಾಏಕಿ ದಾಳಿ ಮಾಡಿದೆ. ಅವರು ಜೋರಾಗಿ ಕಿರುಚಿಕೊಂಡು, ಕೈಯಲ್ಲಿದ್ದ ದೊಣ್ಣೆಯನ್ನು ಬೀಸಿ ತಪ್ಪಿಸಿಕೊಂಡಿದ್ದಾರೆ. ಹುಲಿ ಹಸುವನ್ನು ಕೊಂದಿದೆ.
ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಗಂಗಾಧರ್, ಉಪ ವಲಯ ಅರಣ್ಯಾಧಿಕಾರಿ ಕೆ.ಜಿ.ದಿವಾಕರ್ ಹಾಗೂ ಆರ್ಆರ್ಟಿ ತಂಡ ಘಟನಾ ಸ್ಥಳ ಪರಿಶೀಲನೆ ನಡೆಸಿ ಹಸು ಸಾವನ್ನಪ್ಪಿರುವುದು ಕಂಡು ಬಂದಿದೆ. ಆರ್ಆರ್ಟಿ ಸಿಬ್ಬಂದಿ ತಂಡ ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಿದ್ದಾರೆ. ಚಲನವಲನ ವೀಕ್ಷಿಸಲು ಸಿಸಿಟಿವಿ ಕ್ಯಾಮೆರಾ ಹಾಗೂ ಹಸುವಿನ ಕಳೆಬರಹ ಇರಿಸಿ ಹುಲಿ ಸೆರೆಗೆ ಬೋನ್ ಇರಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಹಾಗೂ ಪದಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದರು.
ಈ ವೇಳೆ ಮನು ಸೋಮಯ್ಯ ಮಾತನಾಡಿ, ‘ ಕೆಲವು ದಿನಗಳ ಹಿಂದಷ್ಟೇ ನಲ್ಲೂರು ಗ್ರಾಮದ ಕೊಕ್ಕಲೆಮಾಡ ದಾದು ಸೋಮಯ್ಯ ಅವರ ಮತ್ತೊಂದು ಹಸುವನ್ನು ಹುಲಿ ಕೊಂದು ಹಾಕಿದೆ. ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ. 3 ದಿನಗಳ ಒಳಗೆ ಹುಲಿ ಸೆರೆ ಹಿಡಿಯುವ ತೀರ್ಮಾನ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ದಾದಾ ಸೋಮಯ್ಯ ಮಾತನಾಡಿ, ‘ದನ ಮೇಯಿಸುತ್ತಿದ್ದಾಗ ಹುಲಿಯು ಹಿಂಭಾಗದಿಂದ ದಾಳಿ ನಡೆಸಲು ಪ್ರಯತ್ನಿಸಿತು. ನಾನು ಜೋರಾಗಿ ಕಿರುಚಿ, ದೊಣ್ಣೆ ಬೀಸಿದೆ. ಹುಲಿ ಪಕ್ಕದಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿತು’ ಎಂದ ಹೇಳಿದರು.