
ಶನಿವಾರಸಂತೆ: ಇಲ್ಲಿನ ಕೊಡಗು– ಹಾಸನ ಗಡಿಭಾಗ ಹೊಸೂರು ಬೆಟ್ಟದ ಬಸವೇಶ್ವರ ಸ್ವಾಮಿಯ ಕೌಟೇಕಾಯಿ ಜಾತ್ರೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆ ಆರಂಭದಲ್ಲಿ ಪದ್ಧತಿಯಂತೆ ಕಲ್ಲಪಳ್ಳಿ ಗ್ರಾಮಸ್ಥರನ್ನು ದೇವಸ್ಥಾನಕ್ಕೆ ವಾದ್ಯಗೋಷ್ಠಿಯೊಂದಿಗೆ ಕರೆತರಲಾಯಿತು. ನಂತರ ಬಸವಣ್ಣ ದೇವರನ್ನು ಅಡ್ಡ ಪಲಕ್ಕಿಯಲ್ಲಿ ಪೂಜಿಸಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.
ಬಸವೇಶ್ವರ ದೇವಸ್ಥಾನ ಸಮಿತಿ, ಗ್ರಾಮಸ್ಥರು ಹಾಗೂ ದಾನಿಗಳ ಸಹಭಾಗಿತ್ವದಲ್ಲಿ ನಡೆಸಲಾಗುವ ಜಾತ್ರೆ ಅಂಗವಾಗಿ ಸೋಮವಾರ ಬೆಳಿಗ್ಗೆ 11ಕ್ಕೆ ದೇವಸ್ಥಾನದಲ್ಲಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ನೂರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು.
ಮಧ್ಯಾಹ್ನ 12.30ಕ್ಕೆ ಅರಳಿ ಮರದ ಕಟ್ಟೆಯ ವೇದಿಕೆಯಲ್ಲಿ ಸಾಂಪ್ರದಾಯಕ ಪದ್ದತಿಯಂತೆ ಕೌಟೇಕಾಯಿಯ ತಿರುಳಿನ ಹಣತೆಗೆ ದೀಪ ಹಚ್ಚಿದ ಸಕಲೇಶಪುರ– ಆಲೂರು ಕ್ಷೇತ್ರದ ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಜಾತ್ರೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ನೂರಾರು ವರ್ಷಗಳಿಂದ ರೈತ, ಜಾನುವಾರು ಮತ್ತು ಸಾವಯವ ಕೃಷಿ ಬಾಂಧವ್ಯತೆಯ ಸಂಕೇತವಾಗಿ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು.
ಸಕಲೇಶಪುರದ ಪ್ರತಿಭಾ ಸಿಮೆಂಟ್ ಮಂಜು ಮಾತನಾಡಿ, ‘ಜಾತ್ರೋತ್ಸವಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದರೆ ಈಗಿನ ಪೀಳಿಗೆಯವರಿಗೆ ಜಾತ್ರೋತ್ಸವದ ಮಹತ್ವ, ಹಿನ್ನೆಲೆ, ಆಚಾರ ವಿಚಾರ, ಸಂಸ್ಕೃತಿ ಪರಂಪರೆಯ ಬಗ್ಗೆ ಹಿರಿಯರು ತಿಳಿಸಿಕೊಡಬೇಕು’ ಎಂದರು. ಪ್ಲಾಸ್ಟಿಕ್ ನಿರ್ಮೂಲನೆ ಮೂಲಕ ಸ್ವಚ್ಛತೆಯನ್ನೂ ಕಾಪಾಡುವಂತೆ ಮನವಿ ಮಾಡಿದರು.
ಜಾತ್ರೆಯ ಬಗ್ಗೆ ದೇವಸ್ಥಾನ ಸಮಿತಿ ಕಾರ್ಯದರ್ಶಿ ರಮೇಶ್ ತಿಳಿಸಿಕೊಟ್ಟರು. ಸಮಿತಿಯಿಂದ ದೇವಸ್ಥಾನಕ್ಕೆ ಬೆಳ್ಳಿಯ ಮುಖವಾಡ ನೀಡಿದ ದಾನಿ ಹೃಷಿಕೇಶ್ ಮತ್ತು ಉದ್ಯಮಿ ಮಧುಸೂದನ್ ಅವರನ್ನು ಸನ್ಮಾನಿಸಲಾಯಿತು.
ಹೊಸೂರು ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎಚ್.ಟಿ.ಪುಟ್ಟೇಗೌಡ, ಗವಿಶ್ರೀ ರುದ್ರಗಿರಿ ಟ್ರಸ್ಟ್ನ ಅಧ್ಯಕ್ಷ ಜಗದೀಶ್, ಸಮಿತಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಜಾತ್ರೋತ್ಸವದ ಪ್ರಯುಕ್ತ ಶನಿವಾರಸಂತೆ, ಹೊಸೂರು ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹೊಸೂರು ಸೇರಿದಂತೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ನಡೆಸಲಾಯಿತು.
ಗ್ರಾಮದ ಮದನ್ ಅವರು ತಮ್ಮ ಮನೆಯ ಗಂಡು ಕರುವನ್ನು ದೇವಸ್ಥಾನಕ್ಕೆ ನೀಡಿದ್ದರು. ಆಡಳಿತ ಮಂಡಳಿ ಹರಾಜು ಪ್ರಕ್ರಿಯೆಯಲ್ಲಿ ₹ 7,100 ರೂಪಾಯಿಗಳಿಗೆ ಮಾರಾಟ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.