ADVERTISEMENT

ಮಡಿಕೇರಿ: ಕಾಳುಮೆಣಸು, ಅಡಿಕೆಗೆ ವಿಮೆ

ಜೂನ್ 30ರೊಳಗೆ ನೋಂದಾಯಿಸಿ; ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 16:40 IST
Last Updated 9 ಜೂನ್ 2022, 16:40 IST
ಹವಾಮಾನ ಬೆಳೆ ವಿಮೆ ಯೋಜನೆಯ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರಮೋದ್ ಮಾಹಿತಿ ನೀಡಿದರು
ಹವಾಮಾನ ಬೆಳೆ ವಿಮೆ ಯೋಜನೆಯ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರಮೋದ್ ಮಾಹಿತಿ ನೀಡಿದರು   

ಮಡಿಕೇರಿ: ಕೊಡಗು ಜಿಲ್ಲೆಯ ಮುಖ್ಯ ಬಹುವಾರ್ಷಿಕ ಬೆಳೆಗಳಾದ ಕಾಳು ಮೆಣಸು, ಅಡಿಕೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನಾ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ನೋಂದ ಣಿಗೆ ಜೂನ್ 30 ಕೊನೆ ದಿನವಾಗಿದೆ.

‘3 ಸಾವಿರಕ್ಕೂ ಹೆಚ್ಚು ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು. ಈ ಕುರಿತು ಬೆಳೆಗಾರರಲ್ಲಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಇಲ್ಲಿ ಗುರುವಾರ ನಡೆದ ಹವಾಮಾನ ಬೆಳೆ ವಿಮಾ ಯೋಜನೆಯ ಜಿಲ್ಲಾ ಮಟ್ಟದ ಮೇಲ್ವಿ ಚಾರಣೆ ಸಮಿತಿಯ ಸಭೆಯಲ್ಲಿ ಸೂಚನೆ ನೀಡಿದರು.

ವಿಮೆ ಮಾಡಿಸಬೇಕು ಎಂದು ಬ್ಯಾಂಕ್‌ಗಳಿಗೆ ಬರುವ ರೈತರನ್ನು ವಾಪಸ್ ಕಳುಹಿಸಬಾರದು, ಇಲ್ಲವೇ ಅಲೆದಾಡಿಸಬಾರದು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ತಕ್ಷಣವೇ ವಿಮೆ ಮಾಡಿಸಬೇಕು ಎಂದ ವಿವಿಧ ಬ್ಯಾಂಕಿನ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.

ADVERTISEMENT

ವಿಮೆಯು ಯಾವ ರೀತಿ ಪಾವತಿಯಾಗುತ್ತದೆ ಎಂಬ ವಿವಿಧ ಹಂತದ ನಿಖರ ಮಾಹಿತಿಯನ್ನು ರೈತರಿಗೆ ಒದಗಿಸ ಬೇಕು. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕೂಡಲೇ ತಮ್ಮ ಅಧೀನದಲ್ಲಿನ ಎಲ್ಲಾ ಬ್ಯಾಂಕ್‍ಗಳಿಗೆ ಮಾಹಿತಿ ನೀಡಿ, ಆಸಕ್ತ ರೈತರನ್ನು ನೋಂದಣಿ ಮಾಡಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಸಹಕಾರ ಇಲಾಖೆಯ ಉಪ ನಿಬಂಧಕರೂ ತಮ್ಮ ಅಧೀನದಲ್ಲಿನ ಡಿಸಿಸಿ ಬ್ಯಾಂಕ್ ಹಾಗೂ ಇತರೆ ಸಹಕಾರ ಬ್ಯಾಂಕಿನಲ್ಲಿ ಹೆಚ್ಚಿನ ಸಂಖ್ಯೆ ರೈತರನ್ನು ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಸಾಮಾಜಿಕ ಜಾಲತಾಣ, ತಾಲ್ಲೂಕು ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ರೈತರಿಗೆ ವಿಮೆ ಕುರಿತು ಅರಿವು ಮೂಡಿಸಬೇಕು ಎಂದು ಎಸ್‍ಬಿಐ ಜನರಲ್ ಇನ್ಸೂರೆನ್ಸ್ ಕಂಪನಿಯ ವ್ಯವಸ್ಥಾಪಕರಿಗೆ ಸೂಚಿಸಿದರು.

ತೋಟಗಾರಿಕೆ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹೆಚ್ಚಿನ ಪ್ರಚಾರ ನಡೆಸಿ ಹೆಚ್ಚು ಹೆಚ್ಚು ರೈತರನ್ನು ವಿಮಾ ವ್ಯಾಪ್ತಿಗೆ ತರಬೇಕು. ಗರಿಷ್ಠ ಪ್ರಮಾಣದ ರೈತರನ್ನು ಬೆಳೆ ವಿಮೆಯಲ್ಲಿ ನೋಂದಣಿ ಮಾಡಿಸಲು ಇಲಾಖೆ, ಬ್ಯಾಂಕ್ ಹಾಗೂ ವಿಮಾ ಕಂಪನಿಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಬೇಕುಎಂದರು.

‘ಕೊಡಗು ಜಿಲ್ಲೆಗೆ ಎಸ್‍ಬಿಐ ಜನರಲ್ ಇನ್ಸೂರೆನ್ಸ್ ವಿಮಾ ಕಂಪನಿಯನ್ನು ನಿರ್ದೇಶನಾಲಯದಿಂದ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರಮೋದ್, ‘ನಿಗದಿತ ಗುರಿ ತಲುಪಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಆರ್.ಶಿವಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ರೆಡ್ಡಿ ಹಾಗೂ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.