
ಕುಶಾಲನಗರ: ಯುವಜನರು ದುಶ್ಚಟಗಳಿಗೆ ದಾಸರಾಗದಂತೆ ಅರಿವು, ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಇಲ್ಲಿನ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಹಾಗೂ ಆರ್ಯವೈಶ್ಯ ಮಂಡಳಿಯಿಂದ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ‘ವಾಸವಿ ಸಪ್ತಾಹ’ದ ಮೊದಲ ಕಾರ್ಯಕ್ರಮ ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ಪ್ರಯುಕ್ತ ನಡೆದ ವಾಕಥಾನ್, ಸೈಕ್ಲಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪೋಷಕರು ತಮ್ಮ ಮಕ್ಕಳ ಬಗ್ಗೆ ಸದಾ ನಿಗಾ ವಹಿಸಬೇಕಿದೆ. ಮಾದಕ ವಸ್ತು ವ್ಯಸನಿಗಳಾಗಿ ಜೀವನ ಹಾಳುಮಾಡಿಕೊಳ್ಳಬಾರದು. ಮಾದಕ ವಸ್ತುಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಜವಾಬ್ದಾರಿ ತೋರಬೇಕಿದೆ’ ಎಂದರು.
ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರದ ಅಭಿವೃದ್ಧಿಯಲ್ಲಿ ಆರ್ಯವೈಶ್ಯ ಸಮಾಜದ ಕೊಡುಗೆ ಅಪಾರವಿದೆ ಎಂದರು. ಶೈಕ್ಷಣಿಕ ಕೇಂದ್ರಗಳ ಸ್ಥಾಪನೆಗೆ ಅಪಾರ ಪ್ರಮಾಣದ ಭೂಮಿ ಒದಗಿಸಿ ಊರನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಸಮಾಜ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಕುಶಾಲನಗರದ ರೋಟರಿ, ಲಯನ್ಸ್, ಜೆಸಿಐ, ಪತ್ರಕರ್ತರ ಸಂಘ, ಪೊಲೀಸ್ ಇಲಾಖೆ, ಸ್ಕೌಟ್ಸ್ ಅಂಡ್ ಗೈಡ್ಸ್, ಸ್ಟೂಡೆಂಟ್ ಪೊಲೀಸ್ ಕೆಡೆಟ್ಸ್, ಕೊಡಗು ಅಭಿವೃದ್ಧಿ ಸಮಿತಿ, ನಿವೃತ್ತ ಸೈನಿಕರ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಆರ್ಯವೈಶ್ಯ ಮಂಡಳಿ ಅಂಗಸಂಸ್ಥೆಗಳು , ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರಿ ಪಾಲಿಟೆಕ್ನಿಕ್ ಬಳಿಯಿಂದ ಕುಶಾಲನಗರವರೆಗೆ ನಡೆದ ವಾಕಥಾನ್, ಸೈಕ್ಲಥಾನ್ ಸಂದರ್ಭ ಮಾದಕ ವಸ್ತುಗಳ ದುಷ್ಪರಿಣಾಮ, ವ್ಯಸನ ಮುಕ್ತ ಸಮಾಜ ನಿರ್ಮಿಸುವ ಘೋಷಣೆಯ ಜಾಗೃತಿ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು.
ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಮುಖರಾದ ಕೆ.ಪ್ರವೀಣ್, ಪಿ.ಎಸ್.ಪ್ರಶಾಂತ್, ಬಿ.ಎಲ್.ಅಶೋಕ್ ಕುಮಾರ್, ಬಿ.ಆರ್.ನಟರಾಜ್, ಕೆ.ಜೆ.ಸತೀಶ್, ಎ.ಎಸ್.ಕುಮಾರ್, ಬಿ.ಎನ್.ಅಂಜನ್, ಅಮೃತ್ ರಾಜ್, ವೈಶಾಖ್ ಪಾಲ್ಗೊಂಡಿದ್ದರು.
‘ಆರೋಗ್ಯವೇ ಸಂಪತ್ತು’
‘ಆರೋಗ್ಯವೇ ನಿಜವಾದ ಸಂಪತ್ತು. ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಕಾಳಜಿ ವಹಿಸಬೇಕಿದೆ’ ಎಂದು ಮಾಜಿ ಶಾಸಕ ಅಪ್ಪಚ್ಚುರಂಜನ್ ಹೇಳಿದರು. ವಸವಿ ಸಪ್ತಾಹದ ಭಾಗವಾಗಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಡಿದರು.ಜಿಲ್ಲೆಯ ಕೊಯಿಮ್ಸ್ ಮೂಲಕ ಉತ್ತಮ ಸೇವೆ ಲಭಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ಬೋಧಕ ಆಸ್ಪತ್ರೆ ವಾಸವಿ ಯುವಜನ ಚಾರಿಟಬಲ್ ಟ್ರಸ್ಟ್ ಮತ್ತು ವಾಸವಿ ಯುವಜನ ಸಂಘದ ಸಹಯೋಗದೊಂದಿಗೆ ಕನ್ನಿಕಾ ಕನ್ವೆನ್ಷನ್ ಸೆಂಟರ್ನಲ್ಲಿ ಶಿಬಿರ ನಡೆಯಿತು.