ಸಿದ್ದಾಪುರ: ಟೊಮೆಟೊ, ತರಕಾರಿ ತುಂಬಿದ್ದ ಬಾಕ್ಸ್ಗಳಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದ, ನೆಲ್ಯಹುದಿಕೇರಿಯ ನಲ್ವತ್ತೇಕರೆ ನಿವಾಸಿ ಮುಸ್ತಫಾ (42) ಎಂಬುವರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಸ್ತಫಾ ಅವರು ತರಕಾರಿ ಮಾರಾಟಕ್ಕೆಂದು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪತ್ರ ಪಡೆದಿದ್ದರು. ವಾರದ ಮೂರು ದಿನ ತರಕಾರಿ ಖರೀದಿಗೆಂದು ಮಂಗಳವಾರ ರಾತ್ರಿ ಹುಣಸೂರಿಗೆ ತೆರಳಿದ್ದರು. ಬುಧವಾರ ಬೆಳಿಗ್ಗೆ 4 ಗಂಟೆಗೆ ಹುಣಸೂರಿನಿಂದ ಮಾಲ್ದಾರೆ ಮಾರ್ಗವಾಗಿ ಸಿದ್ದಾಪುರಕ್ಕೆ ಬರುತ್ತಿದ್ದಾಗ, ಮಾಲ್ದಾರೆ ತಪಾಸಣೆ ಕೇಂದ್ರದಲ್ಲಿ ಹೆಡ್ ಕಾನ್ಸ್ಟೆಬಲ್ ವಿಠ್ಠಲ ಪೂಜಾರಿ ಹಾಗೂ ಸಿಬ್ಬಂದಿ ಮಲ್ಲಪ್ಪ ಮಗಶೀರ್ ಅವರು ವಾಹನವನ್ನು ಪರಿಶೀಲಿಸಿದರು. ಟೊಮೆಟೊ ತುಂಬಿದ್ದ ಬಾಕ್ಸ್ನಲ್ಲಿ ಗೋಮಾಂಸ ಇರುವುದನ್ನು ಪತ್ತೆ ಹಚ್ಚಿದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಎಸ್.ಬೋಜಪ್ಪ ಅವರು ತರಕಾರಿ ತುಂಬಿದ್ದ ಪೆಟ್ಟಿಗೆಗಳನ್ನು ಪರಿಶೀಲಿಸಿದರು. ಯಾರಿಗೂ ತಿಳಿಯದಂತೆ ತರಕಾರಿಗಳ ಕೆಳಭಾಗದಲ್ಲಿ 200 ಕೆ.ಜಿ.ಗೂ ಅಧಿಕ ಮಾಂಸವನ್ನು ಶೇಖರಿಸಿಟ್ಟಿರುವುದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.