ADVERTISEMENT

ಮನೆಗೆ ಬೆಂಕಿ ಹಚ್ಚಿ ಆರು ಮಂದಿಯ ಹತ್ಯೆಗೈದಿದ್ದ ಆರೋಪಿಯ ಶವ ಪತ್ತೆ

ಪೆಟ್ರೋಲ್‌ ಸುರಿದು ಮನೆಗೆ ಬೆಂಕಿ ಹಚ್ಚಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 4:33 IST
Last Updated 6 ಏಪ್ರಿಲ್ 2021, 4:33 IST
ಆರೋಪಿ ಬೋಜ
ಆರೋಪಿ ಬೋಜ   

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಮುಗುಟಗೇರಿ ಗ್ರಾಮದಲ್ಲಿ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ಆರು ಮಂದಿಯನ್ನು ಸಜೀವವಾಗಿ ದಹಿಸಿ ಪರಾರಿಯಾಗಿದ್ದ ಆರೋಪಿ ಬೋಜ (50) ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಮುಗುಟಗೇರಿ ಗ್ರಾಮದ ನರೇಶ್‌ ಅವರ ಕಾಫಿ ತೋಟದಲ್ಲಿ ಮೃತದೇಹ ಪತ್ತೆಯಾಗಿದ್ದು, ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಏನಿದು ಘಟನೆ?:

ADVERTISEMENT

ಮದ್ಯದ ಅಮಲಿನಲ್ಲಿದ್ದ ಬೋಜ, ತನ್ನ ಕುಟುಂಬದವರು ವಾಸವಾಗಿದ್ದ ಮನೆಗೇ ಶನಿವಾರ ನಸುಕಿನಲ್ಲಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಲ್ವರು ಮಕ್ಕಳು ಹಾಗೂ ಆರೋಪಿಯ ಪತ್ನಿಯೂ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದರು.

ಆರೋಪಿ ಬೋಜ ಹಾಗೂ ಆತನ ಪತ್ನಿ ಬೇಬಿ ನಡುವೆ ಗಲಾಟೆ ನಡೆದು ಅದರ ಸೇಡಿಗೆ ಕುಟುಂಬಸ್ಥರು ನಿದ್ರಿಸುತ್ತಿದ್ದ ವೇಳೆ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಾಕಿದ್ದ.

ಆರೋಪಿಯ ಪತ್ನಿ ಬೇಬಿ (40), ಪಣಿ ಎರವರ ಸೀತೆ (45) ಹಾಗೂ ಮಕ್ಕಳಾದ ಪ್ರಾರ್ಥನಾ (6), ಪ್ರಕಾಶ್‌ (6), ವಿಶ್ವಾಸ್‌ (3) ಸೇರಿ ಆರು ಮಂದಿ ಮೃತಪಟ್ಟಿದ್ದರು. ಮಂಜು ಹಾಗೂ ತೋಲ ಅಪಾಯದಿಂದ ಪಾರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.