ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶುಕ್ರವಾರ ವೈವಿಧ್ಯಮಯವಾದ ನೃತ್ಯ ಪ್ರದರ್ಶನಗೊಂಡವು.
ಮೊದಲಿಗೆ ಕುಶಾಲನಗರದ ಕುಂದನ ನೃತ್ಯಾಲಯದಿಂದ ನೃತ್ಯ ವೈವಿಧ್ಯವು ಇಡೀ ಕಾರ್ಯಕ್ರಮಕ್ಕೆ ಶಾಸ್ತ್ರೀಯ ಮುನ್ನುಡಿ ಬರೆಯಿತು. ಒಂದರ ಮೇಲೊಂದರಂತೆ ಕಲಾವಿದರು ವೇದಿಕೆಯಲ್ಲಿ ಪ್ರದರ್ಶಿಸಿದ ಶಾಸ್ತ್ರೀಯ ನೃತ್ಯಗಳು ನಾಟ್ಯಲೋಕವನ್ನೇ ಸೃಷ್ಟಿಸಿತು.
ನಂತರ ಕುಶಾಲನಗರದ ಶಿವಾಧಾರೆ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಕಲಾವಿದರು ಸಾಂಸ್ಕೃತಿಕ ವೈಭವವನ್ನು ಪ್ರಸ್ತುತಪಡಿಸಿದರು.
ಮಡಿಕೇರಿಯ ಪೊಮ್ಮಾಲೆ ಪೊಮ್ಮಕ್ಕಡ ಕೂಟದವರು ಪ್ರದರ್ಶಿಸಿದ ನೃತ್ಯ ವೈವಿಧ್ಯವು ಜನಮನಸೂರೆಗೊಂಡಿತು. ಕೊಡಗಿನ ಸಾಂಸ್ಕೃತಿಕ ರಂಗನ್ನು ತುಂಬಿತು.
ಕುಶಾಲನಗರದ ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ ಕಲಾವಿದರು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು. ಕನ್ನಡ ಸಿರಿ ಕಲಾವೃಂದದ ಕಲಾವಿದರು ನೀಡಿದ ಸಂಗೀತ ರಸಮಂಜರಿಯು ಪ್ರೇಕ್ಷಕರನ್ನು ಗಾನದ ಅಲೆಯಲ್ಲಿ ತೇಲುವಂತೆ ಮಾಡಿತು.
ಮಡಿಕೇರಿಯ ‘ಡ್ರೀಮ್ ಅಚೀವರ್ಸ್’ ಮೂರ್ನಾಡುವಿನ ‘ಸ್ಟೆಪ್ ಆಫ್ ಶ್ಯಾಡೊ ಡ್ಯಾನ್ಸ್’ತಂಡದವರೂ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ, ‘ನಿರಾಕಾರವನ್ನು ಅರ್ಥಮಾಡಿಕೊಂಡು ಆಂತರ್ಯದಲ್ಲಿ ಆರಾಧಿಸಬೇಕು. ಆಂತರ್ಯದಲ್ಲೇ ಭಗವಂತ ಇದ್ದಾನೆ. ಇದು ಸರ್ವಧರ್ಮದ ಆಚರಣೆ ಆಗಲಿ’ ಎಂದು ಹೇಳಿದರು.
ಕಾಂಗ್ರೆಸ್ನ ಹಿರಿಯ ಮುಖಂಡರಾದ ಕೆ.ಪಿ.ಚಂದ್ರಕಲಾ ಅವರು, ‘ಮೈಸೂರು ದಸರೆಗೆ ಕಡಿಮೆ ಇಲ್ಲ. ದೀಪಾಲಂಕಾರ ಚೆನ್ನಾಗಿದೆ’ ಎಂದರು.
ಮುಖಂಡ ಎಚ್.ಎಂ.ನಂದಕುಮಾರ್ ಮಾತಾಡಿ, ‘ಇದು ನಾಡಹಬ್ಬ, ಜಾತಿ, ಧರ್ಮ ಮೀರಿದ ಏಕತೆ, ಭಾವೈಕ್ಯತೆಯಿಂದ ಹಬ್ಬ ಆಚರಿಸುವ’ ಎಂದು ಹೇಳಿದರು.
‘ಮುಡಾ’ ಅಧ್ಯಕ್ಷ ಬಿ.ವೈ.ರಾಜೇಶ್ ಅವರು ‘ಮಡಿಕೇರಿ ದಸರಾ ಬದಲಾವಣೆ ಪರ್ವ ಕಾಣುತ್ತಿದೆ’ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.