
ಮಡಿಕೇರಿ: ‘ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಸಚಿವ ಎನ್.ಎಸ್.ಭೋಸರಾಜು, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ಗೌಡ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಇಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಹಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಸಚಿವ ಭೋಸರಾಜು ಅವರು, ‘ಇಡೀ ಜಿಲ್ಲೆಯಲ್ಲಿ ಅತ್ಯಧಿಕ ದೂರುಗಳು ಬರುವುದೇ ಲೋಕೋಪಯೋಗಿ ಇಲಾಖೆಯ ಮೇಲೆ’ ಎಂದು ಅತೃಪ್ತಿ ಹೊರಹಾಕಿದರು.‘ಮಳೆ ನಿಂತಿದೆ, ಸರ್ಕಾರದಿಂದ ಹಣವೂ ಬಿಡುಗಡೆಯಾಗಿದೆ. ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಯಾವಾಗ‘ ಎಂದು ಪ್ರಶ್ನಿಸಿದರು. ‘ನಿಗದಿತ ಮೊತ್ತಕ್ಕಿಂತ ಸಾಕಷ್ಟು ಕಡಿಮೆ ಮೊತ್ತಕ್ಕೆ ಟೆಂಡರ್ ನೀಡಿರುವಾಗ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷಿಸುವುದು ಸಾಧ್ಯವೇ?’ ಎಂದು ಶಾಸಕ ಡಾ.ಮಂತರ್ಗೌಡ ಸಹ ಅಸಮಾಧಾನ ಹೊರ ಹಾಕಿದರು.
ಕಾಮಗಾರಿ ಆರಂಭಿಸಿ, ಭೂಮಿಪೂಜೆ ಮಾಡಿ!: ‘ಭೂಮಿಪೂಜೆ ನಡೆದು ಒಂದು ತಿಂಗಳಾದರೂ ಕಾಮಗಾರಿ ಆರಂಭವಾಗುವುದೇ ಇಲ್ಲ. ಇನ್ನು ಮುಂದೆ ಕಾಮಗಾರಿ ಆರಂಭವಾದ ನಂತರ ಭೂಮಿಪೂಜೆ ಮಾಡಬೇಕು’ ಎಂದು ಶಾಸಕ ಡಾ.ಮಂತರ್ಗೌಡ ಹೇಳಿದರು.
‘ಗಾಳಿಬೀಡು ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಆಗಿ ಒಂದು ವಾರ ಕಳೆದಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭಿಸಿಲ್ಲ ಏಕೆ’ ಮಂತರ್ಗೌಡ ಪ್ರಶ್ನಿಸಿದರೆ, ‘ಸಿದ್ದಾಪುರ ರಸ್ತೆ ಕಾಮಗಾರಿ ಇನ್ನೂ ಸಹ ಪೂರ್ಣಗೊಳಿಸಿಲ್ಲ’ ಶಾಸಕ ಎ.ಎಸ್.ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಪಡಿತರಕ್ಕೂ ವಸೂಲಿ: ಕಡಮಕಲ್ಲು ಗ್ರಾಮದಲ್ಲಿ 40 ರಿಂದ 50 ಕುಟುಂಬಗಳು ವಾಸ ಮಾಡುತ್ತಿದ್ದು, ಪಡಿತರ ವಿತರಿಸಲು ಪ್ರತಿಯೊಬ್ಬ ಕಾರ್ಡ್ದಾರರಿಂದ ₹ 150 ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಕೂಡಲೇ ಕ್ರಮವಹಿಸಿ ಎಂದು ಡಾ.ಮಂತರ್ಗೌಡ ಸೂಚಿಸಿದರು.
ನಾಮ ನಿರ್ದೇಶಿತ ಸದಸ್ಯರಾದ ಸುರೇಶ್, ಲವ ಚಿಣ್ಣಪ್ಪ, ಅಬ್ದುಲ್ ರೆಹಮಾನ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಅವರು ಹಲವು ವಿಚಾರಗಳನ್ನು ಕುರಿತು ಪ್ರಸ್ತಾಪಿಸಿದರು.
ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರು ರಸ್ತೆ ಸರಿಪಡಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು. ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಡಿಕೇರಿ ನಗರ ರಸ್ತೆ ಸರಿಪಡಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಕೋರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್, ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ಜೀವನ್ ಕುಮಾರ್, ಪವನ್ ಕುಮಾರ್ ಭಾಗವಹಿಸಿದ್ದರು.
ಕಾಫಿ ಟೇಬಲ್ ಪುಸ್ತಕ ಬಿಡುಗಡೆ: ಕೊಡಗು ಜಿಲ್ಲೆಯ ಕಲೆ, ಕ್ರೀಡೆ, ಸಂಸ್ಕೃತಿ, ಖಾದ್ಯ, ಕೊಡಗಿನ ದಿನಚರಿ, ದೈವೀಕತೆ, ಅರಣ್ಯ, ಪ್ರವಾಸಿ ಸ್ಥಳ, ಧಾರ್ಮಿಕ ಸ್ಥಳ, ಪ್ರವಾಸೋದ್ಯಮ ಮತ್ತು ಸಾಹಸೋದ್ಯಮ, ಬೆಳೆ ಹಾಗೂ ಇತರೆ ಎಲ್ಲಾ ವಿಷಯಗಳ ಸಮಗ್ರ ಮಾಹಿತಿಯನ್ನೊಳಗೊಂಡ 160 ಪುಟಗಳ ಕನ್ನಡ ಹಾಗೂ ಆಂಗ್ಲ ಭಾಷೆಯ ಕಾಫಿ ಟೇಬಲ್ ಪುಸ್ತಕವನ್ನು ಸಚಿವ ಎನ್.ಎಸ್.ಭೋಸರಾಜು ಬಿಡುಗಡೆಗೊಳಿಸಿದರು.
ಅಧಿಕಾರಿಗಳ ಮೇಲೆ ಪ್ರಶ್ನೆಗಳ ಸುರಿಮಳೆ ಕಡಮಕಲ್ಲಿನಲ್ಲಿ ಪಡಿತರ ಪಡೆಯಲು ಹಣ ನೀಡಬೇಕಿದೆ: ಶಾಸಕ ಸ್ಥಳ ಪರಿಶೀಲನೆ ನಡೆಸಲು ಆದೇಶ
ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕುಸುನಿತಾ ಮಂಜುನಾಥ್ ನಾಮ ನಿರ್ದೇಶಿತ ಸದಸ್ಯೆ
ಹೇಗೆ ಬೇಕಾದರೂ ನಡೆದುಕೊಂಡರೆ ನಡೆಯುತ್ತದೆ ಎಂಬ ಮನೋಭಾವ ಅಧಿಕಾರಿಗಳಲ್ಲಿ ಇರಬಾರದು. ಕೃತಜ್ಞತಾ ಭಾವ ಇರಬೇಕುಧರ್ಮಜ ಉತ್ತಪ್ಪ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ
ಬೆಳೆಹಾನಿ ವಿಡಿಯೊ ಪ್ರದರ್ಶಿಸಿದ ಶಾಸಕ ಮುಕ್ಕೋಡ್ಲು ಗ್ರಾಮದಲ್ಲಿ ರೈತರೊಬ್ಬರು ಬೆಳೆದಿದ್ದ ಏಲಕ್ಕಿ ಗಿಡಗಳನ್ನು ನಾಶ ಮಾಡಿರುವ ವಿಷಯ ಪ್ರಸ್ತಾಪಿಸಿದ ಶಾಸಕ ಡಾ.ಮಂತರ್ಗೌಡ ಕೃತ್ಯ ಎಸಗಿದ ಅರಣ್ಯ ಇಲಾಖೆಯ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರತಿಕ್ರಿಯಿಸಿದ ಡಿಸಿಎಫ್ ಅಭಿಷೇಕ್ ‘ಅಲ್ಲಿ ಬೆಳೆದಿರುವುದು ಸಣ್ಣ ಗಿಡಗಳು ಮಾತ್ರ. ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದು’ ಎಂದು ಸಮರ್ಥಿಸಿಕೊಂಡರು. ಇದರಿಂದ ಕೆರಳಿದ ಮಂತರ್ಗೌಡ ಬೆಳೆ ನಾಶ ಮಾಡಿದ ವಿಡಿಯೊ ಪ್ರದರ್ಶಿಸಿ ಇವು ಸಣ್ಣ ಗಿಡಗಳೇ ಎಂದು ಪ್ರಶ್ನಿಸಿದರು. ಭೂಮಿಯ ಹಕ್ಕುದಾರಿಕೆ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿಗಳು ಕಂದಾಯ ಇಲಾಖೆಗೆ ಸೇರಿದ್ದು ಎಂದರು. ಡಿಸಿಎಫ್ ಅಭಿಷೇಕ್ ಒಪ್ಪದೇ ‘ಯಾವುದಾದರೂ ಒಂದು ದಾಖಲೆಯಲ್ಲಿ ಅರಣ್ಯ ಎಂದಿದ್ದರೆ ಸಾಕು ಅದು ಅರಣ್ಯಕ್ಕೆ ಸೇರಿದ್ದು’ ಎಂದು ಪ್ರತಿಪಾದಿಸಿದರು. ಕೊನೆಗೆ ವಿಚಾರಣೆ ನಡೆಸುವಂತೆ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರಿಗೆ ಮಂತರ್ಗೌಡ ಸೂಚಿಸಿದರು.
‘ಶಾಲೆಗೆ ಕಟ್ಟಡ ಶೀಘ್ರ’ ಕೊಯನಾಡು ಶಾಲೆ ನಿರ್ಮಾಣ ಸೇರಿದಂತೆ ಹಲವು ಸೂಚನೆಗಳನ್ನು ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರಿಗಳಿಗೆ ನೀಡಿದರು. ಕೊಯನಾಡು ಶಾಲೆ ನಿರ್ಮಾಣಕ್ಕೆ ಜಾಗ ಮಂಜೂರಾತಿ ಯಾವ ಹಂತಕ್ಕೆ ತಲುಪಿದೆ ಎಂದು ಅವರು ಪ್ರಶ್ನಿಸಿದಾಗ ಡಿಸಿಎಫ್ ಅಭಿಷೇಕ್ ಅವರು ಶೀಘ್ರ ಅನುಮತಿ ದೊರೆಯಲಿದೆ ಎಂದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿ ಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ವಿವಿಧ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು. ನಗರ ಪಟ್ಟಣ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಕಾಲ ಮಿತಿಯಲ್ಲಿ ಪರಿಶೀಲಿಸಿ ಅನುಮತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಿದರು.
ಇತರೆ ಸೂಚನೆಗಳು
* ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಸಿಗಬೇಕು. ಯಾವುದೇ ಕಾರಣಕ್ಕೂ ಹೊರಗಡೆಗೆ ಚೀಟಿ ಬರೆಯಬಾರದು. ಲಭ್ಯವಿರುವ ಲಭ್ಯ ಇಲ್ಲದ ಔಷಧಗಳ ಪಟ್ಟಿಯನ್ನು ಆಸ್ಪತ್ರೆಯಲ್ಲಿ ಹಾಕಬೇಕು
* ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು * ಡಿಸೆಂಬರ್ ಒಳಗೆ ಎಸ್ಎಸ್ಎಲ್ಸಿ ಪಠ್ಯಕ್ರಮದ ಪಾಠ ಪೂರ್ಣಗೊಳಿಸಿ
* ಜಿಲ್ಲೆಯ 13 ಕಡೆಗಳಲ್ಲಿ ವಿದ್ಯುತ್ ಉಪ ಕೇಂದ್ರ ಕಾಮಗಾರಿ ಪೂರ್ಣಗೊಳಿಸಿ
* ವಿದ್ಯಾರ್ಥಿ ನಿಲಯಗಳಲ್ಲಿ ಸಮರ್ಪಕವಾಗಿ ಊಟೋಪಚಾರ ಒದಗಿಸಿ ದೂರು ಬರದಂತೆ ಗಮನಹರಿಸಿ
* ಆದಿವಾಸಿ ಕುಟುಂಬದವರಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಮಾಡಿಸಿ
* ಸುವರ್ಣ ಕರ್ನಾಟಕ ಸಮುಚ್ಛಯ ಭವನ ಕಾಮಗಾರಿ ಪೂರ್ಣಗೊಳಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.