
ಕುಶಾಲನಗರ: ಪಟ್ಟಣದ ಬೈಚನಹಳ್ಳಿ ಕಾವೇರಿ ನದಿ ದಂಡೆ ಮೇಲಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರ ಸಂಜೆ ಪುತ್ತರಿ ವೆಳ್ಳಾಟಂ ಶ್ರದ್ದಾಭಕ್ತಿಯಿಂದ ನಡೆಯಿತು.
ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಮುತ್ತಪ್ಪ ಸ್ವಾಮಿಯ ವೆಳ್ಳಾಟಂ ಕಣ್ತುಂಬಿಸಿಕೊಂಡರು.
ವೆಳ್ಳಾಟಂ ನಂತರ ಭಕ್ತರು ಮುತ್ತಪ್ಪ ಸ್ವಾಮಿ ಬಳಿ ತಮ್ಮ ಕಷ್ಟ-ಸುಖ ಹಂಚಿಕೊಂಡು ಪರಿಹಾರ ಪಡೆದುಕೊಂಡು ಕೃತಾರ್ಥರಾದರು. ನಂತರ ಎಲ್ಲಾ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ವರದ ಮಾತನಾಡಿ, ಕಾವೇರಿ ನದಿ ದಡದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪ್ರತಿ ವರ್ಷವೂ ನಡೆಸಲಾಗುತ್ತಿರುವ ಶ್ರೀ ಮುತ್ತಪ್ಪ, ತಿರುವಪ್ಪ ವೆಳ್ಳಾಟ ಹಾಗೂ ಪುತ್ತರಿ ವೆಳ್ಳಾಟಂ ಮತ್ತು ವಾರಕ್ಕೊಮ್ಮೆ ಪಯಂಗುತ್ತಿ ಸೇವೆ ದೇವರಿಗೆ ಮಾಡಿಸಲಾಗುತ್ತಿದೆ. ಈಚೆಗೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇವಾಲಯದ ಎದುರಿನ ನಿವೇಶನ ಖರೀದಿಸಲಾಗುತ್ತಿದೆ. ಇದಕ್ಕೆ ಭಕ್ತರು ದೇಣಿಗೆ ನೀಡುವ ಮೂಲಕ ದೇವಾಲಯದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಮಿತಿ ಉಪಾಧ್ಯಕ್ಷ ವಿ. ಬೋಬಿ, ಎಂ. ಹರೀಂದ್ರನ್, ಪ್ರಧಾನ ಕಾರ್ಯದರ್ಶಿ ಕೆ.ಕೆ. ದಿನೇಶ್, ಸಹಕಾರ್ಯದರ್ಶಿ ಎಂ.ಡಿ. ರಂಜಿತ್ ಕುಮಾರ್, ಖಜಾಂಚಿ ಎ.ಕೆ. ಶೇಖರನ್, ರಕ್ಷಾಧಿಕಾರಿ ಕೆ.ಎಂ. ಹರೀಂದ್ರನ್, ಆಡಳಿತ ಮಂಡಳಿ ಸದಸ್ಯರಾದ ಎಂ.ಡಿ.ರಂಜಿತ್ ಕುಮಾರ್, ವಿಮಲ್ ನಾಯರ್, ಟಿ.ಎನ್.ರಾಜೇಶ್, ವಿನುಕಮಲ್, ಸಿ.ಆರ್.ಸಂದೀಪ್, ಎನ್.ಎಸ್.ನರೇಶ್ ಕುಮಾರ್, ಎಂ.ಎಸ್.ಮಣಿಕಂಠ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.