ADVERTISEMENT

ಕುಶಾಲನಗರ | ಸಂಭ್ರಮ ಸಡಗರದ ಓಣಂ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2023, 7:05 IST
Last Updated 30 ಆಗಸ್ಟ್ 2023, 7:05 IST
ಕುಶಾಲನಗರ ಪಟ್ಟಣದ ಆರ್.ಸಿ.ಬಡಾವಣೆಯ ರುಕ್ಮಿಣಿ ಅವರ ಮನೆಯ ಅಂಗಳದಲ್ಲಿ ಓಣಂ ಹಬ್ಬದ ಅಂಗವಾಗಿ ವಿವಿಧ ಪುಷ್ಪ ಗಳಿಂದ (ಪೊಳಕಂ) ರಂಗೋಲಿ ಬಿಡಿಸಿದರು.
ಕುಶಾಲನಗರ ಪಟ್ಟಣದ ಆರ್.ಸಿ.ಬಡಾವಣೆಯ ರುಕ್ಮಿಣಿ ಅವರ ಮನೆಯ ಅಂಗಳದಲ್ಲಿ ಓಣಂ ಹಬ್ಬದ ಅಂಗವಾಗಿ ವಿವಿಧ ಪುಷ್ಪ ಗಳಿಂದ (ಪೊಳಕಂ) ರಂಗೋಲಿ ಬಿಡಿಸಿದರು.   

ಕುಶಾಲನಗರ: ಭಾವೈಕ್ಯತೆಯ ಪ್ರತೀಕ ಓಣಂ ಹಬ್ಬವನ್ನು ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳ ಮಳೆಯಾಳಿ ಭಾಷಿಕರು ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಮನೆಯ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ(ಪೊಕಳಂ), ಮಧ್ಯೆ ಬೆಳಗುವ ಹಣತೆ, ಸುಣ್ಣ ಬಣ್ಣ ಬಳಿದು ಸಿಂಗರಿಸಿದ ಮನೆ, ಅಡುಗೆ ಮನೆಯಲ್ಲಿ ಘಮ್ಮೆನ್ನುವ ಭಕ್ಷ್ಯಬೋಜನ, ಸಾಂಪ್ರಾದಾಯಿಕ ಉಡುಗೆ ಧರಿಸಿದ್ದ ಮಹಿಳೆಯರ ಹೊಸ ಹುರುಪು ಇವು ಓಣಂ ದಿನ ಕಂಡುಬಂದ ವಿಶೇಷತೆಗಳು.

ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಗುಡ್ಡೆಹೊಸೂರು, ಏಳನೇ ಹೊಸಕೋಟೆ, ಹಾರಂಗಿ, ಚಿಕ್ಕತ್ತೂರು, ಕೂಡಿಗೆ, ಸಿದ್ಧಲಿಂಗಪುರ, ಅರಸಿಣಕುಪ್ಪೆ,ನಾಕುರು-ಶಿರಂಗಾಲ, ನಂಜರಾಯಪಟ್ಟಣ ಮತ್ತಿತರರ ಗ್ರಾಮಗಳಲ್ಲಿ ಹಬ್ಬದ ಅಂಗವಾಗಿ ಕೇರಳಿಯನ್ನರು ಹೊಸ ಉಡುಗೆ ತೊಡುಗೆ ಧರಿಸಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ADVERTISEMENT

ಪರಸ್ಪರ ಸಿಹಿ ವಿತರಿಸುವ ಮೂಲಕ ಓಣಂ ಹಬ್ಬದ ಶುಭಾಶಯ ಹಂಚಿಕೊಂಡರು. ಸಿಂಹಮಾಸದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಕೇರಳಿಯರಿಗೆ ಈ ಸಿಂಹಮಾಸ ಚಿನ್ನದ ಮಾಸವಾಗಿದ್ದು, ಸಿಂಹ ಮಾಸದಲ್ಲಿ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಹಬ್ಬ ಆಚರಿಸಲಾಗುತ್ತದೆ.

ಹಾಗೆಯೇ ಉದ್ಯಮಿ ಭಾಸ್ಕರ್ ಅವರು ಓಣಂ ಹಬ್ಬದ ವಿಶೇಷ ಖಾದ್ಯ ಮತ್ತು ತಿನಿಸುಗಳ ಮಿಶ್ರಣದ ಓಣಂ ಖಾದ್ಯವನ್ನು ತಮ್ಮ ಹೋಟೆಲ್‌‌ನ ಪ್ರವಾಸಿಗರಿಗೂ ಬಡಿಸಿ ಆತಿಥ್ಯ ಮೆರೆದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಭಾಸ್ಕರ್, ಮಲೆಯಾಳಿ ಭಾಷಿಗರ ಪ್ರಮುಖ ಹಬ್ಬ ಓಣಂ ಆಚರಣೆ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಓಣಂ ಆಚರಣೆಗೆ ಕೇವಲ ಮನೆಗಳು ಅಲ್ಲದೇ ಇಡೀ ನಾಡೇ ತೆರೆದುಕೊಳ್ಳುತ್ತದೆ. ಹಾಗಾಗಿ ಕುಶಾಲನಗರದಲ್ಲಿ ವಿಶೇಷವಾಗಿ ಈ ಹಬ್ಬವನ್ನು ಆಚರಿಸಿದ್ದಾಗಿ ಹೇಳಿದರು.

ಕೇರಳದ ಈ ನಾಡ ಹಬ್ಬ ಕೇಳರದಲ್ಲಿ ಮಾತ್ರ ಆಚರಿಸದೆ ಕೇರಳಿಗರು ಎಲ್ಲೆಲ್ಲಿ ನೆಲೆಸಿದ್ದಾರೋ ಅಲ್ಲೆಲ್ಲಾ ಆಚರಿಸಲಾಗುತ್ತಿದೆ. ಜಾತಿ, ಮತ, ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಮಳೆಯಾಳಿ ಭಾಷಿಕರಾದ ಹಿಂದೂ,ಮುಸ್ಲಿಂ, ಕ್ರೈಸ್ತರು ಕೇರಳಿಗರ ಹೊನ್ನಿನ ಹಬ್ಬ ಓಣಂ ಸಂಭ್ರಮ ಎಲ್ಲೆಡೆ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.