ಕುಶಾಲನಗರ: ತಾಲ್ಲೂಕಿನ ಕೇರಳ ಸಮಾಜದ ವತಿಯಿಂದ ಅ.5 ರಂದು ಭಾನುವಾರ ಓಣಂ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ.ರವೀಂದ್ರನ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆ ತನಕ ಪೂಕಳಂ ಸ್ಪರ್ಧೆ, 9 ರಿಂದ 10 ಗಂಟೆ ವರೆಗೆ 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಸಮಾಜದ ಕಟ್ಟಡದ ಬಳಿಯಿಂದ ಮಾವೇಲಿ ವೇಷಧಾರಿ ಜೊತೆಯಲ್ಲಿ ಚಂಡೆ ವಾದ್ಯ ಸಮೇತ ಸಭಾಂಗಣದವರೆಗೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚುರಂಜನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಸೈರಸ್ ಆಸ್ಪತ್ರೆ ಗ್ರೂಪ್ ಚೇರ್ಮನ್ ಸೈನುಲ್ ಆಬಿದೀನ್, ಎಸ್.ಎನ್.ಡಿ.ಪಿ. ಕುಶಾಲನಗರ ಶಾಖೆ ಅಧ್ಯಕ್ಷ ಕೆ.ಟಿ. ಗಣೇಶ್, ಮಾವೇಲಿ ಸಹಕಾರ ಸಂಘದ ಅಧ್ಯಕ್ಷ ಎ.ಕೆ. ವೇಣು, ನಿರ್ದೇಶಕ ಕೆ. ವರದ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭ ಪ್ರತಿಭಾವಂತ ಎಂಜಿನಿಯರಿಂಗ್ ವಿದ್ಯಾರ್ಥಿ ಜಾಯ್ಸ್ ಲೀನಾ ಜೋಸೆಫ್ ಸೇರಿದಂತೆ ಕೇರಳ ಸಮಾಜದ ಆರಂಭಿಕ ಆಡಳಿತ ಮಂಡಳಿ ಸದಸ್ಯರಿಗೆ ಸನ್ಮಾನ, ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾಜದ ಮಾಜಿ ಅಧ್ಯಕ್ಷ ಕೆ.ವರದ ಮಾತನಾಡಿ, ಕೇರಳ ಸಮಾಜ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದ್ದು ರಜತ ಮಹೋತ್ಸವಕ್ಕೆ ಅಣಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅದ್ದೂರಿ ರಜತ ಮಹೋತ್ಸವ ಆಚರಣೆ ಮಾಡಲಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಕೆ.ಬಾಬು ಮೂರ್ನಾಡು, ಕಾರ್ಯದರ್ಶಿ ಕೆ.ಜೆ.ರಾಬಿನ್, ಜಂಟಿ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ.ಆನಂದ್, ನಿರ್ದೇಶಕರಾದ ಎಂ.ಜಿ.ಪ್ರಕಾಶ್, ಜಿತೇಶ್, ಸುಶೀಲಾ, ನಿರ್ಮಲ ಶಿವದಾಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.