ADVERTISEMENT

ನೀರು ಪಾಲಾದ ಭತ್ತದ ಬೆಳೆ: ಕೃಷಿಕರಿಗೆ ಕಣ್ಣೀರು ತರಿಸಿದೆ ಅಕಾಲಿಕ ಮಳೆ

ಜೆ.ಸೋಮಣ್ಣ
Published 5 ಡಿಸೆಂಬರ್ 2024, 6:27 IST
Last Updated 5 ಡಿಸೆಂಬರ್ 2024, 6:27 IST
ಗೋಣಿಕೊಪ್ಪಲು ಬಳಿಯ ಹಳ್ಳಿಗಟುವಿನ ಪ್ರಗತಿಪರ ಕೃಷಿಕ ರವಿಶಂಕರ್ ಅವರ ಗದ್ದೆಯಲ್ಲಿ ನೀರು ಪಾಲಾಗಿರುವ ಭತ್ತದ ಬೆಳೆ
ಗೋಣಿಕೊಪ್ಪಲು ಬಳಿಯ ಹಳ್ಳಿಗಟುವಿನ ಪ್ರಗತಿಪರ ಕೃಷಿಕ ರವಿಶಂಕರ್ ಅವರ ಗದ್ದೆಯಲ್ಲಿ ನೀರು ಪಾಲಾಗಿರುವ ಭತ್ತದ ಬೆಳೆ   

ಗೋಣಿಕೊಪ್ಪಲು: ದಿಢೀರನೆ ಎರಡು ದಿನಗಳ ಕಾಲ ಬಿದ್ದ ಅಕಾಲಿಕ ಮಳೆಗೆ ಕೈಗೆ ಬಂದ ರೈತರ ಬೆಳೆ ಬಾಯಿಗೆ ಬಾರದಂತಾಗಿದೆ.

ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಬೆಳೆದಿದ್ದ ಭತ್ತ ಬಹುತೇಕ ಜಲಮಯವಾಗಿದೆ. ಮತ್ತೆ ಕೆಲವು ಕಡೆ ನೆಲಕ್ಕೆ ಬಿದ್ದು ಮಣ್ಣು ಪಾಲಾಗಿದೆ. ಹಳ್ಳಿಗಟ್ಟುವಿನ ಪ್ರಗತಿ ಪರ ಕೃಷಿಕ ರವಿಶಂಕರ್ ಅವರ 50 ಎಕರೆಯ ಭತ್ತದ ಕೃಷಿ ಅರ್ಧಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ಮುಳುಗಿದೆ. ಉತ್ತಮ ಕೃಷಿಕರಾಗಿರುವ ರವಿಶಂಕರ್ 30ಕ್ಕೂ ಹೆಚ್ಚಿನ ತಳಿಗಳನ್ನು ಬೆಳೆದಿದ್ದರು. ಇದರಲ್ಲಿ 17 ಬಗೆಯ ತಳಿಗಳ ಭತ್ತದ ಕೊಯ್ಲಿಗೆ ಮುಂದಾಗಿದ್ದರು.

ವಿಶಾಲವಾದ ಗದ್ದೆ ಬಯಲಿನಲ್ಲಿ ಒಂದು ಕಡೆ ಕೊಯ್ಲು ನಡೆಯುತ್ತಿದ್ದರೆ, ಮತ್ತೊಂದು ಕಡೆ ಒಕ್ಕಲು ಕೆಲಸ ನಡೆಯುತ್ತಿತ್ತು. ಶುಭ್ರವಾದ ವಾತಾವರಣದಲ್ಲಿ ಮಳೆಯ ಮುನ್ಸೂಚನೆ ಕಾಣದ ರವಿಶಂಕರ್ ಕೈಗೆ ಸಿಕ್ಕಿದ ನೂರಾರು ಕಾರ್ಮಿಕರನ್ನು ಕರೆದುಕೊಂಡು ಕೊಯ್ಲು ಕೆಲಸಕ್ಕೆ ಮುಂದಾಗಿದ್ದರು. ಮಳೆಯಿಂದಾಗಿ ಕಾರ್ಮಿಕರ ಸಮಸ್ಯೆ, ಕೂಲಿ ಹೆಚ್ಚಳ, ಹವಾಮಾನ ವೈಪರೀತ್ಯ ಇವುಗಳ ನಡುವೆ ಶ್ರಮಪಟ್ಟು ಬೆಳೆದಿದ್ದ ಬೆಳೆ ನೀರು ಪಾಲಾಗಿರುವುದನ್ನು ಕಂಡು ಕಣ್ಣೀರು ಹಾಕುವಂತಾಯಿತು.

ADVERTISEMENT

ಕೊಯ್ಲು ಗದ್ದೆಯಲ್ಲೇ ಉಳಿದಿದ್ದು ಅದೆಲ್ಲ ನೀರಿನಲ್ಲಿ ಮುಳುಗಿದೆ. ಭತ್ತದ ಹುಲ್ಲನ್ನು ಮೇಲಕ್ಕೆ ಎತ್ತಿ ಅರಿ ಕಟ್ಟಲು ಹೋದರೆ ಬತ್ತವೆಲ್ಲ ನೀರಿನಲ್ಲಿ ಜುಳುಜುಳನೆ ಉದುರುತ್ತಿದೆ. ಉತ್ತಮ ಗುಣಮಟ್ಟದ ಮತ್ತು ಸಮೃದ್ಧಿಯಾಗಿ ಬೆಳೆದಿದ್ದ ಭತ್ತದ ಬೆಳೆ ನೀರು ಪಾಲಾದದುನ್ನು ಕಂಡು ಹೊಟ್ಟೆ ಉರಿಯುತ್ತಿದೆ ಎನ್ನುತ್ತಾರೆ  ರವಿಶಂಕರ್.

ಹಿಂದೆ ಭತ್ತ ಕೊಯ್ಲಿಗೆ ಬರುವ ವೇಳೆಯಲ್ಲಿ, ಅಂದರೆ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್‌ನಲ್ಲಿ ಸಾಮಾನ್ಯ ಮೋಡವಾಗಿ ತುಂತುರು ಮಳೆ ಬರುವುದು ವಾಡಿಕೆಯಾಗಿತ್ತು. ಇದರಿಂದ ಬೆಳೆಗೆ ಹೆಚ್ಚಿನ ಹಾನಿ ಆಗುತ್ತಿರಲಿಲ್ಲ. ಆದರೆ ಇದೀಗ ಬಿದ್ದ ಮಳೆ ಭಾರಿ ಪ್ರಮಾಣದ ಹಾನಿ ಮಾಡಿದೆ ಎಂದು ನೋವು ತೋಡಿಕೊಂಡರು.

ಐನಂಡ ಕುಟುಂಬದ ಭತ್ತ ನೀರು ಪಾಲು: ಪೊನ್ನಂಪೇಟೆ ಬಳಿಯ ಮುಗಟಗೇರಿಯ ಐನಂಡ ಕುಟುಂಬಸ್ಥರ ವಿಶಾಲವಾದ ಭತ್ತದ ಬಯಲು ಕೂಡ ನೀರಿನಲ್ಲಿ ಮುಳುಗಿದೆ. ಉತ್ತಮ ಕೃಷಿಕರಾಗಿರುವ ಐನಂಡ ಕುಟುಂಬದ ಮಂದಣ್ಣ, ತಮ್ಮಯ್ಯ, ಬೋಪಣ್ಣ ಹಾಗೂ ಸೋಮಣ್ಣ ಅವರು ತಮ್ಮ ಯಾವುದೇ ಗದ್ದೆಯನ್ನು ಪಾಳು ಬಿಡದೆ ಪ್ರತಿ ವರ್ಷ ಕೃಷಿ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿ ಭತ್ತವನ್ನು ಇವರು ಸಮೃದ್ಧವಾಗಿ ಬೆಳೆದಿದ್ದಾರೆ. ಉತ್ತಮ ಇಳುವರಿ ನೀಡುವ ತಳಿಯ ಭತ್ತ ಗೊನೆ ಬಾಗಿ ಕೊಯ್ಲಿಗೆ ಬಂದಿತ್ತು. ಇನ್ನೇನು ಕೊಯ್ಲು ಮಾಡಿ ಕಣಕ್ಕೆ ತುಂಬಿಸಿಕೊಳ್ಳಬೇಕು ಎಂಬ ಸಂತದಲ್ಲಿರುವಾಗ ಇದ್ದಕ್ಕಿದಂತೆ ಬಂದ ಅಕಾಲಿಕ ಮಳೆ ಬೆಳೆಯನ್ನೆಲ್ಲ ನೀರು ಪಾಲು ಮಾಡಿದೆ.

ಈ ಬಗ್ಗೆ ತಮ್ಮ ನೋವು ತೋಡಿಕೊಂಡ ಐನಂಡ ಬೋಪಣ್ಣ, ನಮ್ಮ ಅಣ್ಣನ ಮಗನಾದ ಡಾ.ಸೋಮಣ್ಣ ಉಪನ್ಯಾಸಕ ವೃತ್ತಿ ಬಿಟ್ಟು ಕೃಷಿಕನಾಗಿದ್ದ. ಸಮೃದ್ಧಿಯಾಗಿ ಬೆಳೆದಿದ್ದ ಭತ್ತವನ್ನು ನೋಡುವುದೇ ಅನಂದ ವಾಗುತ್ತಿತ್ತು. ಅದೆಲ್ಲ ಈಗ ನೀರಿನಲ್ಲಿ ಮುಳುಗಿದೆ. ಇದರಿಂದ ಕೃಷಿ ಬಗ್ಗೆ ಒಂದು ರೀತಿಯ ಜುಗುಪ್ಸೆ ಬಂದಿದೆ. ಒಂದು ಕಡೆ ಏರುತ್ತಿರುವ ಉತ್ಪಾದನಾ ವೆಚ್ಚ, ಮತ್ತೊಂದು ಕಡೆ ಹವಮಾನ ವೈಪರೀತ್ಯದಿಂದ ಉತ್ತಮ ಕೃಷಿಕನಾಗುವ ಕನಸು ಭಗ್ನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಣಿಕೊಪ್ಪಲು ಬಳಿಯ ಹಳ್ಳಿಗಟು ವಿನ ಪ್ರಗತಿಪರ ಕೃಷಿಕ ರವಿಶಂಖರ್ ಅವರ ಗದ್ದೆಯಲ್ಲಿ ನೀರು ಪಾಲಾಗಿರುವ ಭತ್ತದ ಕೃಷಿ
ಮುಗುಟಗೇರಿಯ ಐನಂಡ ಕುಟುಂಬಸ್ಥರ ಗದ್ದೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಭತ್ತ
ಹವಾಮಾನ ವೈಪರೀತ್ಯದಿಂದ ರೈತರಿಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಈಗಾಗಲೆ ಕನಿಷ್ಟ ಮಟ್ಟಕ್ಕೆ ಬಂದಿರುವ ಕೊಡಗಿನ ಭತ್ತದ ಕೃಷಿ ಉಳಿಯಲಾರದು
ಐನಂಡ ಬೋಪಣ್ಣ ಪೊನ್ನಂಪೇಟೆ
ಭತ್ತದ ಬೆಳೆ ಹಾನಿಯಿಂದ ಭಾರಿ ಪ್ರಮಾಣದ ನಷ್ಟವಾಗಿದೆ. ಗದ್ದೆ ಬದುವಲ್ಲಿ ನಿಂತು ನೀರಿನಲ್ಲಿ ಮುಳುಗಿರುವ ಭತ್ತ ನೋಡಿ ಬಹಳ ನೋವಾಗುತ್ತಿದೆ
ರವಿಸಂಶಕರ್ ಹಳ್ಳಿಗಟ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.