ವಿರಾಜಪೇಟೆ: ‘ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಪ್ರಮುಖ’ ಎಂದು ಸಮೀಪದ ಅರಮೇರಿಯ ಕಳಂಚೇರಿ ಮಠದ ಮಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಮಹಿಳಾ ಸಮಾಜದ ಸಭಾಂಗಣದಲ್ಲಿ ಈಚೆಗೆ ನಡೆದ ವಿರಾಜಪೇಟೆಯ ಮಾಜಿ ಸೈನಿಕರ ಸಹಕಾರ ಸಂಘದ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೊಡಗು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಮಹಾನ್ ಯೋಧರನ್ನು ಒಳಗೊಂಡಂತೆ ಕೊಡಗು ಜಿಲ್ಲೆಯು ದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಯೋಧರನ್ನು ನೀಡಿರುವುದು ಹೆಮ್ಮೆಯ ವಿಚಾರ’ ಎಂದು ತಿಳಿಸಿದರು
‘ಕೊಡಗಿನ ಪ್ರತಿ ಮನೆಗಳಲ್ಲಿ ದೇಶ ರಕ್ಷಣೆ ಬಗ್ಗೆ ಒಂದಿಲ್ಲೊಂದು ವೀರತ್ವದ ಕಥೆಗಳಿರುತ್ತಿದ್ದವು. ಇಂತಹ ಒಂದು ಹೆಮ್ಮೆಯ ಜಿಲ್ಲೆ ನಮ್ಮ ಕೊಡಗು ಎಂದರೆ ತಪ್ಪಾಗಲಾರದು. ಮುಂದೆಯೂ ಕೂಡ ಯುವಜನರು ಹೆಚ್ಚಾಗಿ ಸೈನ್ಯಕ್ಕೆ ಸೇರುವ ಮೂಲಕ ದೇಶ ರಕ್ಷಣೆಗೆ ಪಣ ತೊಡಬೇಕು’ ಎಂದರು.
‘ರೈತರು, ಸೈನಿಕರು ಹಾಗೂ ಕಾರ್ಮಿಕರು ದೇಶದ ಪ್ರಮುಖ ನಾಯಕರು. ಈ ಮೂರು ವರ್ಗದ ಸಹಕಾರವಿಲ್ಲದೇ ನಮ್ಮ ಪ್ರತಿನಿತ್ಯದ ಕಾರ್ಯ ನಡೆಯುವುದು ಅಸಾಧ್ಯ. ಸಮಾಜದಲ್ಲಿ ನಾವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಮುನ್ನಡೆ ಸಾಧಿಸಿದ್ದೇವೆ. ಆದರೆ ನೈತಿಕವಾಗಿ ಕುಸಿದಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಡಿವೈಎಸ್ಪಿ ಮಹೇಶ್ ಕುಮಾರ್ ಮಾತನಾಡಿ, ‘ಸೈನಿಕರು ದೇಶದ ಶಾಂತಿ ಹಾಗೂ ನಮ್ಮ ಜೀವ ಕಾಪಾಡುವ ರಕ್ಷಕರು. ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶ ಸೇವೆ ತೊಡಗಿರುವುದು’ ಶ್ಲಾಘನೀಯ ಎಂದು ತಿಳಿಸಿದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಮಾತನಾಡಿ, ‘ಮಾಜಿ ಸೈನಿಕರು ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು’ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳಾದ ಬಾಚಿಮಂಡ ಕಾರ್ಯಪ್ಪ, ಕರ್ನಲ್ ಪುಟ್ಟಿಚಂಡ ಗಣಪತಿ, ದುದ್ದಿಯಂಡ ಹಸೈನಾರ್ ಸೂಫಿ, ಕಟ್ಟೇರ ವಿಶ್ವನಾಥ್, ನೆಲ್ಲಮಕ್ಕಡ ಜಪ್ಪು ಮುದ್ದಯ್ಯ, ಎಂ.ಕೆ.ಸಲಾಂ, ತೋರೆರ ಪೂವಯ್ಯ, ನಾಮೇರ ನವೀನ್, ಮುಕ್ಕಾಟ್ಟೀರ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಜ ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ, ನಿರ್ದೇಶಕರಾದ ಚೇಂದ್ರಿಮಾಡ ಕೆ.ನಂಜಪ್ಪ, ಪಟ್ರಪಂಡ ಎಂ.ಕರುಂಬಯ್ಯ, ಕೊಂಗಂಡ ಎ.ಭೀಮಯ್ಯ, ಅಣ್ಣಾಳಮಾಡ ಡಿ. ಸುಬ್ಬಯ್ಯ, ಬಾಳೆಕುಟ್ಟೀರ ಎ.ಬೋಪಯ್ಯ, ಅಪ್ಪಯ್ಯ ಎಚ್.ಕೆ, ಕಬ್ಬಚ್ಚಿರ ಎ.ಬೋಪಣ್ಣ, ಪಟ್ರಪಂಡ ಎ.ಚಂಗಪ್ಪ ಉಪಸ್ಥಿತರಿದ್ದರು.
‘ಯೋಧನ ತಾಯಿ ಹೆಂಡತಿ ನಿಜವಾದ ಸೈನಿಕರು’
ಲೆಪ್ಟಿನೆಂಟ್ ಕರ್ನಲ್ ಬಾಳೆಯಡ ಕೆ.ಸುಬ್ರಮಣಿ ಮಾತನಾಡಿ ‘ನಿಜವಾದ ಸೈನಿಕರೆಂದರೆ ಯೋಧನ ತಾಯಿ ಮತ್ತು ಹೆಂಡತಿ. ದೇಶ ರಕ್ಷಣೆಗೆ ಮನೆಯಲ್ಲಿನ ಮಗ ಅಥವಾ ಪತಿ ತೆರಳಿದ್ದಾಗ ದೃಢ ಮನಸ್ಸಿನಿಂದ ಆ ಹೆಣ್ಣು ಮನೆಯ ಜವಾಬ್ದಾರಿ ಹೊತ್ತು ಸಂಸಾರ ಸಾಗಿಸುತ್ತಾಳೆ. ಆದ್ದರಿಂದ ಹೆಣ್ಣಿಗೆ ಆ ಕೀರ್ತಿ ಸಲ್ಲಬೇಕು’ ಎಂದರು. ‘ಪೋಷಕರು ಮಕ್ಕಳಲ್ಲಿ ಶಿಕ್ಷಣದ ಜತೆ ದೇಶ ಪ್ರೇಮ ಬೆಳೆಸಬೇಕು. ಸಮಾಜ ತುಂಬಾ ಸಂಕೀರ್ಣವಾಗುತ್ತಿದೆ. ಶಿಸ್ತು ಸಂಯಮ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಕಲುಷಿತಗೊಂಡ ಮನುಷ್ಯನ ಮನಸ್ಸು ತಿಳಿಯಾಗಲು ಸಾಧ್ಯ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.