
ಸೋಮವಾರಪೇಟೆ: ಜಿಲ್ಲೆಯ ಎಲ್ಲೆಡೆ ಕಾಫಿ ಕೊಯ್ಲು ಪ್ರಾರಂಭಗೊಂಡು, ಬೆಳೆಗಾರರು ಫಸಲನ್ನು ಮನೆಗೆ ತುಂಬಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ವರ್ಷದ ಪ್ರಾರಂಭದಲ್ಲಿ ಕಾಫಿಗೆ ಇದ್ದ ಬೆಲೆ ದಿನದಿಂದ ದಿನಕ್ಕೆ ಇಳಿಮುಖಗೊಳ್ಳುತ್ತಿರುವುದು ಬೆಳೆಗಾರರ ನಿದ್ದೆಗೆಡಿಸಿದೆ. ಪ್ರಸಕ್ತ ಸಾಲಿನಲ್ಲಿ ಸಾಧಾರಣ ಕಾಫಿ ಇದ್ದು, ಕಾಫಿ ಕೊಯ್ಲು ಮಾಡಿ, ಒಣಗಿಸಿ ಮಾರುಕಟ್ಟೆಗೆ ತರುವ ವೇಳೆಗೆ ಮತ್ತಷ್ಟು ಬೆಲೆ ಇಳಿಮುಖಗೊಳ್ಳಬಹುದು ಎಂದು ಬೆಳೆಗಾರರ ಆತಂಕವಾಗಿದ್ದು, ಕಾರ್ಮಿಕರನ್ನು ಹೆಚ್ಚಿನ ಬೆಲೆ ತೆತ್ತು ಕೆಲಸ ಮಾಡಿಸುತ್ತಿರುವುದನ್ನು ಕಾಣಬಹುದು.
ಪ್ರಸಕ್ತ ಸಾಲಿನಲ್ಲಿ ಹೊರ ಜಿಲ್ಲೆ ಸೇರಿದಂತೆ, ಅಸ್ಸಾಂ, ತಮಿಳುನಾಡಿನ ಸಾವಿರಾರು ಕಾರ್ಮಿಕರು ಕೆಲಸಕ್ಕಾಗಿ ಜಿಲ್ಲೆಗೆ ಆಗಮಿಸಿದ್ದರಿಂದ, ಕೊಂಚ ಮಟ್ಟಿಗೆ ಬೆಳೆಗಾರರು ನಿರಾಳರಾಗಿದ್ದಾರೆ. ಆದರೂ, ಕಾರ್ಮಿಕರಿಗೆ ದುಬಾರಿ ಬೆಲೆ ತೆರುವುದರೊಂದಿಗೆ, ಏಜೆಂಟ್ ಕಮಿಷನ್, ವಾಹನ ಬಾಡಿಗೆ ಸೇರಿದಂತೆ ಹೆಚ್ಚಿನ ಖರ್ಚನ್ನು ಬೆಳೆಗಾರರು ನಿಬಾಯಿಸಬೇಕಿದೆ. ಕೆಲವರು ಹೊರ ಜಿಲ್ಲೆಯಿಂದ ಆಗಮಿಸುವ ಕೆಲಸಗಾರರನ್ನು ಗ್ರಾಮದ ಒಂದು ಮನೆಯಲ್ಲಿ ಇರಲು ಬಿಟ್ಟು, ಬೆಳೆಗಾರರಲ್ಲಿ ಕೆಲಸಕ್ಕೆ ಕಳಿಸುವ ಮೂಲಕ ಹಣ ಮಾಡುವ ದಂಧೆ ಮಾಡುತ್ತಿರುವುದನ್ನು ಕಾಣಬಹುದು. ಹಲವು ಗ್ರಾಮಗಳಲ್ಲಿ ರೈತರು ಸಂಘಗಳಲ್ಲಿ ಹೆಚ್ಚಿನ ಹಣ ನೀಡದೆ, ನಿಗದಿತ ಹಣ ನೀಡಿ ಕೆಲಸ ಮಾಡಿಸಿಕೊಳ್ಳಬೇಕೆಂದು ಮಾಡಿದ ನಿರ್ಣಯ ಇಲ್ಲಿ ಕೆಲಸಕ್ಕೆ ಬರುತ್ತಿಲ್ಲ.
ಅಸ್ಸಾಂನಿಂದ ಆಗಮಿಸಿರುವ ಸಾಕಷ್ಟು ಕಾರ್ಮಿಕರು ಸ್ಥಳೀಯ ಭಾಷೆಯನ್ನು ಕಲಿತು ಕೆಲಸ ಮಾಡುತ್ತಿದ್ದಾರೆ.
‘ಕಳೆದ 16 ವರ್ಷಗಳ ಹಿಂದೆ ಅಸ್ಸಾಂನಿಂದ ಹಾಸನ ಜಿಲ್ಲೆಯ ಹೊಸೂರಿಗೆ ಕುಟುಂಬದೊಂದಿಗೆ ಆಗಮಿಸಿ ನೆಲೆ ನಿಂತಿದ್ದೇವೆ. ಕೆಲಸ ಇರುವಲ್ಲಿಗೆ ತೆರಳಿ ಕೆಲಸ ಮಾಡಿಕೊಡುತ್ತೇವೆ. ಕೇವಲ ಕಾಫಿ ಕೊಯ್ಲು ಮಾತ್ರ ಮಾಡದೆ, ಉಳಿದ ಕೆಲಸವನ್ನು ಮಾಡುತ್ತಿದ್ದೇವೆ’ ಎಂದು ಬಾಬು ತಿಳಿಸಿದರು.
ಚಿಕ್ಕಪುಟ್ಟ ಮಕ್ಕಳು ಸಹ ಪೋಷಕರೊಂದಿಗೆ ಕಾಫಿ ತೋಟಕ್ಕೆ ಬಂದು ಸಂಜೆ ಮನೆಗೆ ಹಿಂದಿರುತ್ತಾರೆ. ತಾಲ್ಲೂಕಿನಲ್ಲಿ 28,590 ಹೆಕ್ಟೇರ್ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22,900 ಹೆ.ನಲ್ಲಿ ಅರೇಬಿಕಾ ಕಾಫಿ ಹಾಗೂ 5690 ಹೆ.ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ರೋಬಸ್ಟಾ ಕಾಫಿ ಬೆಳೆಯುವ ಪ್ರದೇಶ ಹೆಚ್ಚುತ್ತಿದ್ದು, ಅರೇಬಿಕಾ ಕಡಿಮೆಯಾಗುತ್ತಿದೆ.
ದಿನದಿಂದ ದಿನಕ್ಕೆ ಬೆಲೆ ಇಳಿಕೆ ಪ್ರಸಕ್ತ ಸಾಲಿನಲ್ಲಿ ಸಾಧಾರಣ ಕಾಫಿ ಇದೆ ಬೆಲೆಯೂ ಕಡಿಮೆಯಾಗುತ್ತಿದೆ. ಕಾಫಿಗೆ ಬೆಲೆ ಸ್ಥಿರವಾಗಿದ್ದಲ್ಲಿ ಮಾತ್ರ ಬೆಳೆಗಾರರಿಗೆ ತಾವು ಬೆಳೆದ ಫಸಲಿಗೆ ಇಂತಿಷ್ಟೇ ಹಣ ಬರಬಹುದು ಎಂಬ ನಂಬಿಕೆ ಇರುತ್ತದೆ. ಆದರೆ ದಿನದಿಂದ ದಿನಕ್ಕೆ ಕಾಫಿ ಬೆಲೆ ಇಳಿಕೆ ಆಗುತ್ತಿರುವುದು ನೆಮ್ಮದಿ ಕೆಡಿಸುತ್ತಿದೆ. ಕಾಫಿಗೂ ಎಂಎಸ್ಪಿ ಬಂದಲ್ಲಿ ನಮಗೂ ಸ್ವಲ್ಪ ನೆಮ್ಮದಿಯಾಗುತ್ತದೆ ಬೋಪಣ್ಣ ಕಾಫಿ ಬೆಳೆಗಾರ ಬಿಳಿಗೇರಿ ಬೆಳೆಗೆ ದುಪ್ಪಟ್ಟು ಖರ್ಚು ಕಾಫಿ ಬೆಳೆಗಾರರು ಈಗಾಗಲೇ ದುಪ್ಪಟ್ಟು ಖರ್ಚು ಮಾಡಿ ಕಾಫಿ ವ್ಯವಸಾಯ ಮಾಡುತ್ತಿರುವುದು ಕಾಣಬಹುದು. ಗೊಬ್ಬರ ಕ್ರಿಮಿನಾಶಕ ಕಾರ್ಮಿಕರ ವೇತನ ಸೇರಿದಂತೆ ಎಲ್ಲವೂ ದುಬಾರಿಯಾಗಿದೆ. ಈಗ ಇನ್ನಷ್ಟು ಹೆಚ್ಚು ಬೆಲೆ ನೀಡಿ ಕಾಫಿ ಕೊಯ್ಲು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಾಫಿಗೆ ದರ ಕುಸಿದಲ್ಲಿ ಕಾಫಿ ತೋಟಗಳ ಅವನತಿ ಪ್ರಾರಂಭಗೊಳ್ಳಲಿದೆ ಉತ್ತಯ್ಯ ಇನಕನಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.