ಸುಂಟಿಕೊಪ್ಪ: ಯಾವುದೇ ಜಾತಿ, ಸಮುದಾಯದ ಆಚರಣೆಗಳು ಅವರ ಸಂಪ್ರದಾಯಗಳನ್ನು ಬಿಂಬಿಸುವಂತಿರಬೇಕು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನುಬೈಲ್ ಹಿಂದೂ ಮಲಯಾಳಿ ಸಮಾಜದ 3ನೇ ವರ್ಷದ ಓಣಂ ಆಚರಣೆ ಪ್ರಯುಕ್ತ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಂಧವ್ಯದ ಜೊತೆಗೆ ದೇಶಭಕ್ತಿ ಮೊಳಗಿಸಲು ಇಂತಹ ಅಚರಣೆಗಳು ಅಡಿಪಾಯವಾಗಲಿವೆ ಎಂದರು.
ಮಲಯಾಳಿ ಸಮುದಾಯದ ಆಚಾರ, ವಿಚಾರ, ಸಂಸ್ಕೃತಿ ಪರಂಪರೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಇದೇ ರೀತಿಯ ಒಗ್ಗಟನ್ನು ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗಬೇಕೆಂದು ಅವರು ಸಲಹೆ ನೀಡಿದರು. ಹಬ್ಬ ಹರಿದಿನಗಳು, ಜಾತ್ರೆಗಳು ಸಮಾಜವನ್ನು ಬೆಸೆಯಲು ಪೂರಕವಾಗಿದೆ ಎಂದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ, ಓಣಂ ಆಚರಣೆ ಹಿಂದೂ ಧರ್ಮೀಯರನ್ನು ಒಂದೆಡೆ ಸೇರಿಸುವ, ಸಾಮರಸ್ಯದ ಆಚರಣೆಯಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಮೊಬೈಲ್ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ಪ್ರತಿಯೊಬ್ಬರೂ ಮುಳುಗಿ ಹೋಗಿದ್ದು, ಈ ರೀತಿಯ ಕಾರ್ಯಕ್ರಮಗಳು ಮಾದರಿ ಎಂದು ಬಣ್ಣಿಸಿದರು.
ಸಮಾಜದ ಸಲಹೆಗಾರ ಟಿ.ಆರ್.ವಾಸುದೇವನ್ ಮಾತನಾಡಿ, ಓಣಂ ಮಲಯಾಳಿ ಭಾಷಿಗರು ಒಂದೆಡೆ ಸೇರಿ ಆಚಾರ, ವಿಚಾರಗಳು, ಕಲೆ - ಸಂಸ್ಕೃತಿಗಳನ್ನು ಬಿಂಬಿಸುತ್ತಿದ್ದು, ವಿವಾಹ ಸಂದರ್ಭದಲ್ಲಿ ಸ್ಥಳೀಯ ಸಂಬಂಧಗಳ ಬಗ್ಗೆ ಗಮನಹರಿಸಬೇಕೆಂದರು.
ಮಲಯಾಳಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಕ್ಕಳಿಗೆ ನೃತ್ಯ ಸ್ಪರ್ಧೆ ಹಾಗೂ ಮಹಿಳೆಯರಿಗೆ ಪೂಕಳಂ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆರಂಭದಲ್ಲಿ ಕಲ್ಲೂರು ಗ್ರಾಮದ ಬಸವೇಶ್ವರ ದೇವಾಲಯದ ಆವರಣದಿಂದ ಓಣಂ ಮೆರವಣಿಗೆಯನ್ನು ಸಮಾಜದ ಅಧ್ಯಕ್ಷ ಕೆ.ಬಿ.ರಾಜ. ಹಾಗೂ ಪಂಚಾಯಿತಿ ಸದಸ್ಯೆ ರಾಧಾಮಣಿ ಉದ್ಘಾಟಿಸಿದರು. ಮಹಿಳೆಯರು,ಮಕ್ಕಳು ಹಾಗೂ ಪುರುಷರು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರೆ,ಮಾವೇಲಿ ಛದ್ಮವೇಷಧಾರಿಯಾಗಿ ಕೇರಳದ ಮಟ್ಟನೂರಿನ ಅಭಿ ಗಮನ ಸೆಳೆದರು. ಓಣಂ ಸದ್ಯ (ಭೋಜನ) ಸಮಸ್ತರ ಬಾಯಿ ರುಚಿ ಇಮ್ಮಡಿ ಗೊಳಿಸಿತು.
ಸಮಾಜದ ಅಧ್ಯಕ್ಷ ಕೆ.ಬಿ.ರಾಜ, ಕಾರ್ಯದರ್ಶಿ ಶಂಕರ ನಾರಾಯಣ, ಪಂಚಾಯಿತಿ ಸದಸ್ಯರಾದ ಪ್ರೇಮ, ಸೀತೆ, ಪಿಡಿಒ ಅಸ್ಮಾ, ಕಾನುಬೈಲ್ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ಮೂರ್ತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಬಾಲಕೃಷ್ಣರೈ, ಸೋಮವಾರಪೇಟೆ ತಾಲ್ಲೂಕು ಹಿಂದೂ ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಪಿ.ಎಂ.ಬಿಜು, ಸ್ಯಾಮ್ಸನ್, ಕಾಫಿ ಬೆಳೆಗಾರರಾದ ನೀಲಮ್ಮ ಪೆಮ್ಮಯ್ಯ, ಅಡಿಕೇರಿ ಧರ್ಮಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೇವಾ ಪ್ರತಿನಿಧಿ ಯಶೋಧ, ನಾಕೂರು ಶಿರಂಗಾಲ ಕೊಡವ ಕೂಟದ ಅಧ್ಯಕ್ಷ ಯಶು ತಮ್ಮಯ್ಯ, ಗೌಡ ಸಮಾಜದ ಅಧ್ಯಕ್ಷ ಎಂ.ಎಂ.ಕಾರ್ಯಪ್ಪ, ಬೆಳ್ಳರಿಕಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ.ಬೋಪಯ್ಯ, ಮಳೂರು ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಬಿ.ಗಣೇಶ್, ಕಾನ್ ಬೈಲ್ ರಾಮಮಂದಿರ ಅಧ್ಯಕ್ಷ ಬಿ.ಜಿ.ನರೇಂದ್ರ, ವಿ.ಕೆ.ಗಂಗಾಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.