ವಿರಾಜಪೇಟೆ: ಪರಿಸರ ಕಾಳಜಿಯೊಂದಿಗೆ ಶ್ರದ್ಧಾಭಕ್ತಿ ಹಾಗೂ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ಈ ಬಾರಿ ಗಣೇಶೋತ್ಸವ ಆಚರಿಸೋಣ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದರು.
ಪ್ರಜಾವಾಣಿ ವಾರ್ತೆ
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ವಿರಾಜಪೇಟೆ ನಗರದ ಐತಿಹಾಸಿಕ ಜನೋತ್ಸವ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಿತಿಯ ಅಧ್ಯಕ್ಷರೂ ಆಗಿರುವ ಅವರು ಮಾತನಾಡಿ ಪ್ರಾಣಿ-ಪಕ್ಷಿಗಳು ಸೇರಿ ಪ್ರಕೃತಿಗೆ ಮಾರಕವಾಗಬಹುದಾದಂತಹ ಯಾವುದೇ ಬಣ್ಣವಾಗಲಿ, ಪೇಪರ್ ವಸ್ತುಗಳನ್ನಾಗಲಿ ಬಳಸದೇ ಗಣೇಶೋತ್ಸವವನ್ನು ಆಚರಿಸೋಣ. ಉತ್ಸವದ ಸಂದರ್ಭ ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ಕಲೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳನ್ನು ವಿವಿಧ ಸಮಿತಿಗಳು ಆಯೋಜಿಸುತ್ತಿರುವುದು ಶ್ಲಾಘನೀಯ. ಐತಿಹಾಸಿಕ ಜನೋತ್ಸವ ಸಮಿತಿಯ ವತಿಯಿಂದ ಉತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ಆಯೋಜಿಸಲಾಗುವುದು. ಉತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಉತ್ಸವ ಆಚರಣೆಯ ಕುರಿತು ಸಿದ್ಧತೆಗಳ ಕುರಿತು ಸಂಬಂಧಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಲಹೆ ಸೂಚನೆ ನೀಡಿದರು.
ವೇದಿಕೆಯಲ್ಲಿ ವಿರಾಜಪೇಟೆ ನಗರದ ಐತಿಹಾಸಿಕ ಜನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಬರೀಶ್ ಶೆಟ್ಟಿ, ತಹಶೀಲ್ದಾರ್ ಪ್ರವೀಣ್ ಕುಮಾರ್, ಸಿಪಿಐ ಅನೂಪ್ ಮಾದಪ್ಪ, ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ, ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಸದಸ್ಯರು, ಪುರಸಭೆ ಸದಸ್ಯರು, ಸಮಿತಿಯ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪಟ್ಟಣದ ವಿವಿಧ 22 ಗೌರಿಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಸೇರಿ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.