ADVERTISEMENT

ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಗ್ರಹಣ: ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ

ಲೋಕಾಯುಕ್ತ ವತಿಯಿಂದ ತಾಲ್ಲೂಕು ಮಟ್ಟದಲ್ಲಿ ಬಾಕಿ ಉಳಿದ ಪ್ರಕರಣಗಳ ವಿಚಾರಣೆ, ವಿಲೇವಾರಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:23 IST
Last Updated 14 ಫೆಬ್ರುವರಿ 2026, 6:23 IST
   

ಮಾಲೂರು: ಕರ್ನಾಟಕ ರಾಜ್ಯ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರ ನೇತೃತ್ವದಲ್ಲಿ ಲೋಕಾಯುಕ್ತ ಇಲಾಖೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಶುಕ್ರವಾರ ನಗರದಲ್ಲಿ ಆಯೋಜಿಸಲಾಯಿತು. 

ಸಭೆ ಉದ್ಘಾಟಿಸಿ ಮಾತನಾಡಿದ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ, ‘ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಿದಲ್ಲಿ ಭಾರತದ ಭವಿಷ್ಯ ಉಜ್ವಲವಾಗಲಿದೆ. ಆದರೆ, ದೇಶದ ಎಲ್ಲ ರಂಗಗಳಲ್ಲಿ ಭ್ರಷ್ಟಾಚಾರದ ಭೂತವು ಹರಡಿದ್ದು, ಅಭಿವೃದ್ಧಿಗೆ ಮಾರಕವಾಗಿದೆ. ಇದರಿಂದ ಬಡವರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರತಿಯೊಬ್ಬ ನಾಗರಿಕ ತಮ್ಮ ಮೂಲ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಬೇಕು. ಲಂಚ ಕೇಳುವುದು ಮತ್ತು ಕೊಡುವುದು ಎರಡೂ ಅಪರಾಧವೇ. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಬಿಲ್ ಕಲೆಕ್ಟರ್ಸ್, ವೈದ್ಯರು, ಗ್ರಾಮ ಆಡಳಿತ ಅಧಿಕಾರಿಗಳು ಉಳಿದುಕೊಳ್ಳಬೇಕು ಎಂಬುದಾಗಿ ಈಗಾಗಲೇ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಎಂದರು.

ADVERTISEMENT

ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಕೆಲವು ಔಷಧಗಳು ಇಲ್ಲ ಎಂಬುದಾಗಿ ಹೇಳಿ ಹೊರ ಕಳುಹಿಸಿದ ಬಗ್ಗೆ ದೂರುಗಳು ಬಂದಿವೆ. ರೋಗಿಗಳಿಗೆ ಅಗತ್ಯವಿರುವ ಎಲ್ಲ ಔಷಧಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲೇ ಕೊಡಬೇಕು. ಅನ್ಯ ದೇಶಗಳು ಅಭಿವೃದ್ಧಿ ವಿಚಾರದಲ್ಲಿ ಸ್ಪರ್ಧೆ ಮಾಡಿದರೆ, ನಮ್ಮ ದೇಶವು ಭ್ರಷ್ಟಾಚಾರದಲ್ಲಿ ಸ್ಪರ್ಧೆ ಮಾಡುತ್ತಿದೆ ಎಂದರು. 

ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬೆಳಸಬೇಕು. ಅಂತಹ ಕುಟುಂಬಗಳು ಬೆಳೆಯುತ್ತವೆ. ನಾವೂ ತಿನ್ನುವ ಅನ್ನ ನಮ್ಮದಾಗಿರಬೇಕು. ಬೇರೆಯವರ ಶ್ರಮದ ಬೆವರಿನ ಹನಿಯಾಗಬಾರದು. ಮುಖ್ಯವಾಗಿ ಮಾಲೂರು ಭಾಗದಲ್ಲಿ ಹೆಚ್ಚಾಗಿ ಜಲ್ಲಿ ಕ್ರಷರ್‌ಗಳಿವೆ. ಅದರಲ್ಲಿ ಎಲ್ಲಿಂದಲೋ ಬಂದು ಕೂಲಿ ಮಾಡುತ್ತಾರೆ. ಅವು ಕೆಲಸ ನಿರ್ವಹಿಸುವ ಸಮಯದ ಬಗ್ಗೆ ಅಧಿಕಾರಿಗಳು ನಿಗಾ ಇಡಬೇಕು ಎಂದು ಸೂಚಿಸಿದರು. 

ಈ ಸಭೆಯಲ್ಲಿ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಬ್ಬಂದಿ ಮತ್ತು ಜನರು, ಸರ್ಕಾರಿ ಆಸ್ಪತ್ರೆ, ಅಬಕಾರಿ ಇಲಾಖೆ, ಸರ್ವೆ ಇಲಾಖೆ, ಉಪನೋಂದಣಿಗೆ ಸಂಬಂಧಿಸಿದ ಸುಮಾರು 154 ಪ್ರಕರಣಗಳನ್ನು ವಿಚಾರಣೆ ನಡೆಸಿ ವಿಲೆ ಮಾಡಲಾಯಿತು. ಬೆಳಗ್ಗೆ 10.30ಕ್ಕೆ ಆರಂಭಗೊಂಡ ಸಭೆಯು ಸಂಜೆ 6.30ರವರೆಗೆ ನಡೆಯಿತು. 

ಕಾರ್ಯಕ್ರಮದಲ್ಲಿ ಲೋಕಾಯುಕ್ತ ಹೆಚ್ಚುವರಿ ಕಾರ್ಯದರ್ಶಿ ಅರವಿಂದ್, ಲೋಕಾಯುಕ್ತ ಎಸ್.ಪಿ. ಆಂಟೋನಿ ಜಾನ್, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್ ಬಾಗೇವಾಡಿ, ಎಸ್.ಪಿ. ಕನ್ನಿಕ ಸಿಕ್ರಿವಾಲ್, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಎಂ.ವಿ. ರೂಪ ಇಒ ಕೃಷ್ಣಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದೂರುದಾರರು ಇದ್ದರು.

ತಾಲ್ಲೂಕು ಮಟ್ಟದಲ್ಲಿ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯಲ್ಲಿ ದೂರುದಾರು ಬಾಗವಹಿಸಿದ್ದರು

ಕಾರ್ಮಿಕರಿಗೆ ಮಾಲೀಕರೇ ವಿಮೆ ಮಾಡಿಸಬೇಕು

ಮಾಲೂರಿಗೆ ಬಂದಾಗ ಕ್ರಷರ್‌ನಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದ. ಆ ಸಂದರ್ಭದಲ್ಲಿ ಆ ಕುಟುಂಬಸ್ಥರಿಗೆ ₹15 ಲಕ್ಷ ಪರಿಹಾರ ಕೊಡಿಸಲಾಗಿತ್ತು ಎಂದು ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ತಿಳಿಸಿದರು.  ಕ್ರಷರ್‌ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕ್ರಷರ್ ಮಾಲೀಕರು ವಿಮೆ ಮಾಡಿಸಬೇಕು. ವಿಮೆಯ ಮೊತ್ತವನ್ನು ಮಾಲೀಕರೇ ಪಾವತಿಸಬೇಕು. ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದರ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳಾಗಿ ಇರಬೇಕು. ನಾವೆಲ್ಲ ಈ ದೇಶ ಹಾಗೂ ರಾಜ್ಯಕ್ಕೆ ಸೇವೆ ಮಾಡಲು ಬಂದಿದ್ದೇವೆ. ಅದನ್ನು ಸರಿಯಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. 

ಜನರನ್ನು ಅಲೆದಾಡಿಸಬಾರದು

ಬಡವರು ಮತ್ತು ಜನಸಾಮಾನ್ಯರನ್ನು ಸರ್ಕಾರಿ ಅಧಿಕಾರಿಗಳು ಅಲೆದಾಡಿಸಬಾರದು. ಬಡವರು ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಮಾಲೂರು ತಾಲ್ಲೂಕಿನಲ್ಲಿ ಬಾಕಿ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಸಭೆ ನಡೆಸಲಾಗಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಬೇಕು. ನಮ್ಮ ಜನರು ಹಣ ಪಡೆದು ಮತ ಚಲಾಯಿಸುವ ಬದಲಿಗೆ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸುವ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು.  ರಾಜ್ಯದ ಪ್ರತಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುತ್ತದೆ. ನಾನು ಕೋಲಾರ ಜಿಲ್ಲೆಗೆ ಸೇರಿದ್ದರಿಂದಾಗಿ ಕೋಲಾರ ಜಿಲ್ಲೆಯನ್ನು ಮೊದಲಿಗೆ ಲಂಚಮುಕ್ತಗೊಳಿಸಲು ಶ್ರಮಿಸುತ್ತೇನೆ.  ಬಿ.ವೀರಪ್ಪ ಉಪ ಲೋಕಾಯುಕ್ತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.