ADVERTISEMENT

ಕೋವಿಡ್‌ 3ನೇ ಅಲೆಗೆ ಸನ್ನದ್ಧರಾಗಿ: ಡಾ.ಜಗದೀಶ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 15:01 IST
Last Updated 8 ಜುಲೈ 2021, 15:01 IST

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆಯ ಅಬ್ಬರ ಇಳಿದಿದೆ. ಆದರೆ, ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಜನರು ಮೈ ಮರೆಯದೆ ಕೋವಿಡ್‌ 3ನೇ ಅಲೆ ಎದುರಿಸಲು ಸನ್ನದ್ಧರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ಸೇವಾ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕೋವಿಡ್‌ ಲಸಿಕೆ ಆಂದೋಲನಕ್ಕೆ ವೇಗ ತುಂಬುವ ಕಾರ್ಯ ತುರ್ತಾಗಿ ಆಗಬೇಕು. ಸಂಭವನೀಯ 3ನೇ ಅಲೆ ತೀವ್ರತೆಯನ್ನು ನಿಯಂತ್ರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯಕ್ಕೆ ಕೋವಿಡ್ ಪ್ರತಿರೋಧಕ ಲಸಿಕೆಯೊಂದೇ ಭರವಸೆಯ ರಕ್ಷಾ ಕವಚ ಎಂದು ಹೇಳಿದ್ದಾರೆ.

2 ಡೋಸ್ ಲಸಿಕೆ ಪಡೆದವರ ಪ್ರಮಾಣ ಹೆಚ್ಚಬೇಕು. ಜನ ಸ್ವಪ್ರೇರಣೆಯಿಂದ ಲಸಿಕೆ ಪಡೆಯಬೇಕು. ಈ ನಡುವೆ ಕೊರೊನಾ ವೈರಾಣುವಿನ ರೂಪಾಂತರ ತಳಿ ಕಾಣಿಸಿಕೊಂಡಿರುವುದು ಆತಂಕ ಹುಟ್ಟಿಸಿದೆ. ಈ ಡೆಲ್ಟಾ ಪ್ಲೆಸ್ ತಳಿಯ ವೈರಾಣು ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಬಾರದ ಕಾರಣ ಪೋಷಕರು ಅವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಬೇಕು ಮತ್ತು ಕೋವಿಡ್ ನಿಯಂತ್ರಣದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ADVERTISEMENT

6 ವರ್ಷದೊಳಗಿನ ಮಕ್ಕಳಿಲ್ಲಿ ಸೌಮ್ಯ ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ, ಅವರಿಗೆ ಮನೆಯಲ್ಲೇ ತಯಾರಿಸುವ ಪೌಷ್ಟಿಕ ಆಹಾರ ನೀಡಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರು ಅಥವಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.