ADVERTISEMENT

ಫೆ.17ರಿಂದ ಪೂರ್ವ ಸಿದ್ದತಾ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 14:01 IST
Last Updated 13 ಫೆಬ್ರುವರಿ 2020, 14:01 IST

ಕೋಲಾರ: ‘ಎಸ್ಸೆಸ್ಸೆಲ್ಸಿ ರಾಜ್ಯಮಟ್ಟದ ಪೂರ್ವ ಸಿದ್ದತಾ ಪರೀಕ್ಷೆ ಫೆ.12ರಿಂದ ಆರಂಭವಾಗಲಿದ್ದು, ಮಕ್ಕಳಿಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಶಿಕ್ಷಕರು ಮುಂದಾಗಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸಲಹೆ ನೀಡಿದರು.

ತಾಲ್ಲೂಕಿನ ನರಸಾಪುರ ಜೂನಿಯರ್ ಕಾಲೇಜಿನಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿ, ‘ಪರೀಕ್ಷೆಗೆ ಉಳಿದ ದಿನಗಳಲ್ಲಿ ಸಮಯ ವ್ಯರ್ಥಮಾಡದೇ ಅಭ್ಯಾಸ ಮಾಡಬೇಕು’ ಎಂದರು.

‘ರಾಜ್ಯಮಟ್ಟದ ಪೂರ್ವಸಿದ್ದತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಪ್ರೌಢಶಿಕ್ಷಣ ಮಂಡಳಿಯಿಂದಲೇ ಸರಬರಾಜು ಅಗುತ್ತದೆ. ಅಂತಿಮ ಪರೀಕ್ಷೆ ಮಾದರಿಯಲ್ಲೇ ಮುಖ್ಯ ಶಿಕ್ಷಕರು ಭದ್ರತೆಯಲ್ಲಿಟ್ಟುಕೊಂಡು ಆಯಾ ದಿನದ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆ ಬರೆಸಬೇಕು’ ಎಂದು ಸೂಚಿಸಿದರು.

ADVERTISEMENT

‘ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡಬೇಡಿ. ಕಚೇರಿಯ ನೋಡಲ್ ಅಧಿಕಾರಿ ಮುನಿರತ್ನಯ್ಯ ಶೆಟ್ಟಿ ಅವರಿಗೆ ಆಯಾದಿನದ ಪರೀಕ್ಷಾ ಹಾಜರಾತಿ ಸೇರಿದಂತೆ ಇತರೆ ವಿವರಗಳನ್ನು ಕಾಲಕಾಲಕ್ಕೆ ಕಳುಹಿಸಬೇಕು. ಉಳಿದಿರುವ ದಿನಗಳಲ್ಲಿ ಸಮಯಪಾಲನೆ, ನಿರಂತರ ಅಭ್ಯಾಸ, ಗುಂಪು ಚರ್ಚೆಗಳಿಗೆ ಅವಕಾಶ ನೀಡಿ, ಜಿಲ್ಲೆಯ ಉತ್ತಮ ಗುಣಾತ್ಮಕ ಫಲಿತಾಂಶ ಸಿದ್ದಪಡಿಸಲು ಕ್ರಮಕೈಗೊಳ್ಳಬೇಕು’ ಎಂದರು.

‘ಫೆ.17ಕ್ಕೆ ಪ್ರಥಮ ಭಾಷೆ, ಫೆ.18ಕ್ಕೆ ಗಣಿತ, ಫೆ.19ದ್ವಿತೀಯ ಭಾಷೆ, ಫೆ.20ಕ್ಕೆ ತೃತೀಯ ಭಾಷೆ, ಫೆ.22ಕ್ಕೆ ಸಮಾಜ ವಿಜ್ಞಾನ, ಫೆ.24ಕ್ಕೆ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ. ದ್ವಿತೀಯ ಮತ್ತು ತೃತೀಯ ಭಾಷೆಗಳ ಪರೀಕ್ಷೆ ಬೆಳಿಗ್ಗೆ 9.30ರಿಂದ 12.30ರವರೆಗೂ ನಡೆಯಲಿದ್ದು, ಉಳಿದ ಎಲ್ಲಾ ವಿಷಯಗಳ ಬೆಳಿಗ್ಗೆ 12.30ರಿಂದ ಮಧ್ಯಾಹ್ನ 12.45ರವರೆಗೂ ನಡೆಯಲಿದೆ’ ಎಂದು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.