
ಪ್ರಜಾವಾಣಿ ವಾರ್ತೆ
ಮಾಲೂರು: ಸಾಮಾಜಿಕ ಜಾಲತಾಣಗಳಲ್ಲಿ ಮಹನಿಯರನ್ನು ಅವಮಾನಿಸುತ್ತಿರುವ ಹಾಗೂ ಸಮುದಾಯಗಳ ನಡುವೆ ವಿಷಬೀಜ ಬಿತ್ತುತ್ತಿರುವ ‘ಗುಲಾಮರ ಅಪ್ಪ’ ಎಂಬ ಫೇಸ್ಬುಕ್ ಪೇಜನ್ನು ತಕ್ಷಣ ನಿಷೇಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಶೀರಸ್ತೆದಾರ್ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾ ಸಂಚಾಲಕ ಲಕ್ಕೂರು ವೆಂಕಟೇಶ್ ಮಾತನಾಡಿ, ಗುಲಾಮರ ಅಪ್ಪ ಫೇಸ್ಬುಕ್ ಖಾತೆಯಲ್ಲಿ ನಿರಂತರವಾಗಿ ಕೆಳವರ್ಗದ ಸಮುದಾಯದವರನ್ನು ಕೀಳುಮಟ್ಟದಲ್ಲಿ ಭಾಷೆಯನ್ನು ನಿಂದಿಸಲಾಗುತ್ತಿದೆ. ಹಾಗಾಗಿ ಇದರ ಹಿಂದೆ ಇರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎಕೆ ವೆಂಕಟೇಶ್ ಮಾತನಾಡಿ, ಇನ್ನು ಮುಂದೆ ಸಮಾಜದ ಸ್ವಾಸ್ಥ್ಯ ಕೆಡಸುವಂತಹ ಖಾತೆಗಳು ತೆರೆಯದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಲ್ಕೆರೆ ಮುನಿರಾಜು, ಅಗ್ರಹಾರ ಬಾಬು, ಟೇಕಲ್ ಶಫಿ, ಮಡಿವಾಳ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.