ADVERTISEMENT

ಕೆಜಿಎಫ್: ಗುರುಭವನ ನಿರ್ಮಾಣ, ನಿರಾಸೆಯಲ್ಲಿ ಶಿಕ್ಷಕರು

15 ವರ್ಷದ ಹಿಂದೆ ಜಿಲ್ಲೆಯಲ್ಲಿ ಪ್ರಥಮ ಗುರುಭವನ

ಕೃಷ್ಣಮೂರ್ತಿ
Published 5 ಸೆಪ್ಟೆಂಬರ್ 2020, 7:03 IST
Last Updated 5 ಸೆಪ್ಟೆಂಬರ್ 2020, 7:03 IST
ಕೆಜಿಎಫ್ ರಾಬರ್ಟ್‌ಸನ್‌ ಪೇಟೆಯಲ್ಲಿರುವ ಗುರುಭವನ ದಲ್ಲಿ ತ್ಯಾಜ್ಯಗಳ ರಾಶಿ ತುಂಬಿರುವುದು
ಕೆಜಿಎಫ್ ರಾಬರ್ಟ್‌ಸನ್‌ ಪೇಟೆಯಲ್ಲಿರುವ ಗುರುಭವನ ದಲ್ಲಿ ತ್ಯಾಜ್ಯಗಳ ರಾಶಿ ತುಂಬಿರುವುದು   

ಕೆಜಿಎಫ್: ಪ್ರತಿ ಬಾರಿ ಶಿಕ್ಷಕರ ದಿನಾಚರಣೆ ದಿನದಂದು ಶಿಕ್ಷಕರು ತಮ್ಮ ಕನಸಿನ ಗುರುಭವನದ ನಿರ್ಮಾಣವನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಶಿಕ್ಷಕರ ಸಂಘಟನೆಯಲ್ಲಿನ ಭಿನ್ನಾಭಿಪ್ರಾಯ ಅವರ ಕನಸನ್ನು ನನಸಾಗಿಸಲು ಸಾಧ್ಯವಾಗುತ್ತಿಲ್ಲ.

ಸುಮಾರು 15 ವರ್ಷದ ಹಿಂದೆ ಜಿಲ್ಲೆಯಲ್ಲಿ ಪ್ರಥಮ ಗುರುಭವನ ನಿರ್ಮಾಣ ಮಾಡುವ ಹುಮ್ಮಸ್ಸಿನಿಂದ ಶಿಕ್ಷಕರು ತಮ್ಮ ಒಂದು ದಿನದ ಸಂಬಳವನ್ನು ದೇಣಿಗೆಯಾಗಿ ನೀಡಿದರು. ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀನಿವಾಸಗೌಡ ಮತ್ತು ಶಾಸಕ ಎಸ್.ರಾಜೇಂದ್ರನ್ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದ್ದರು. ಶಾಸಕರು ತಮ್ಮ ಅನುದಾನದಿಂದ ₹5 ಲಕ್ಷ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದರು. ಟಿಬಿಎಸ್ (ಶಿಕ್ಷಕರ ಕಲ್ಯಾಣ ನಿಧಿ) ನಿಂದ ₹10 ಲಕ್ಷ ಬಿಡುಗಡೆಯಾಯಿತು. ಕಟ್ಟಡ ಲಿಂಟ್ಲ್ ಹಂತದವರೆವಿಗೂ ಬಂದಿತು.

ಇದೇ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು ಬದಲಾದರು. ಇದರಿಂದಾಗಿ ಕಾಮಗಾರಿ ಕುಂಠಿತಗೊಂಡಿತು. ಗುರುಭವನ ನಿಲ್ಲಬಾರದು ಎಂಬ ನಿಟ್ಟಿನಲ್ಲಿ ಪುನಃ ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರಯತ್ನ ಮುಂದುವರಿಸಿದರು. ಅಂದಿನ ಶಾಸಕ ವೈ.ಸಂಪಂಗಿ ₹10 ಲಕ್ಷ ಅನುದಾನ ನೀಡಿದರು. ಜಿಲ್ಲಾ ಪಂಚಾಯಿತಿಯಿಂದ ₹2.50 ಲಕ್ಷ ಅನುದಾನ ಬಂದಿತು.

ADVERTISEMENT

ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡರೆ ಟಿಬಿಎಸ್‌ನಿಂದ ಪುನಃ ₹15 ಲಕ್ಷ ಅನುದಾನ ಬರುವ ಭರವಸೆ ಸಿಕ್ಕಿತು. ಗುರುಭವನ ಕೆಳ ಅಂತಸ್ತು ಪೂರ್ಣಗೊಂಡಿತು. ಮೂರು ಬಾರಿ ಶಿಕ್ಷಕರ ದಿನಾಚರಣೆಯನ್ನು ಅಲ್ಲಿ ನಡೆಸಲಾಯಿತು. ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ₹10 ಲಕ್ಷ ನೀಡುವ ಭರವಸೆ ನೀಡಿದರು. ಅದು ಕಾರ್ಯಗತಗೊಳ್ಳಲಿಲ್ಲ. ಅಂದಿನ ಸಂಸದ ಕೆ.ಎಚ್.ಮುನಿಯಪ್ಪ ₹4.99 ಲಕ್ಷ ಬಿಡುಗಡೆ ಮಾಡುವಂತೆ ಎರಡು ಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ರವಾನಿಸಿದರು. ಅದೂ ಪ್ರಯೋಜನವಾಗಲಿಲ್ಲ. ಕಟ್ಟಡ ಕಾಮಗಾರಿ ಮತ್ತೆ ಸ್ಥಗಿತಗೊಂಡಿತು.

ಭವನ ಇಂದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸುತ್ತಮುತ್ತಲಿನ ಪ್ರದೇಶದ ತ್ಯಾಜ್ಯಗಳನ್ನು ತಂದು ಸುರಿಯುವ ತಾಣವಾಗಿದೆ. ಗುರುಭವನದಲ್ಲಿನ ತ್ಯಾಜ್ಯ ನಿವಾರಣೆಗೆ ನ್ಯಾಯಾಧೀಶರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಶ್ರಮದಾನ ಮಾಡಿದ್ದರು. ನಗರಸಭೆ ಸಿಬ್ಬಂದಿಯೇ ಸುತ್ತಮುತ್ತಲಿನ ಪ್ರದೇಶದ ಕಸ ತಂದು ಸುರಿಯಲಾರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.