ADVERTISEMENT

ಕೆ.ಸಿ ವ್ಯಾಲಿ ನೀರಿನಿಂದ ಅಂತರ್ಜಲ ವೃದ್ಧಿ: ನಗರಸಭೆ ಅಧ್ಯಕ್ಷೆ ಶ್ವೇತಾ

ಹಿಂದುಳಿದ ವರ್ಗಗಳ ನಾಯಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 5:14 IST
Last Updated 6 ಫೆಬ್ರುವರಿ 2021, 5:14 IST
ಕೋಲಾರ ನಗರದ ದೇವರಾಜ ಅರಸು ಭವನದಲ್ಲಿ ವಿವಿಧ ಸಂಸ್ಥೆಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ಹಿಂದುಳಿದ ವರ್ಗಗಳ ನಾಯಕರನ್ನು ಸನ್ಮಾನಿಸಲಾಯಿತು
ಕೋಲಾರ ನಗರದ ದೇವರಾಜ ಅರಸು ಭವನದಲ್ಲಿ ವಿವಿಧ ಸಂಸ್ಥೆಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ಹಿಂದುಳಿದ ವರ್ಗಗಳ ನಾಯಕರನ್ನು ಸನ್ಮಾನಿಸಲಾಯಿತು   

ಕೋಲಾರ: ಜಿಲ್ಲೆಗೆ ಕೆಸಿ.ವ್ಯಾಲಿ ಹರಿದು ಬಂದು ಕೆರೆಗಳು ಭರ್ತಿ ಆಗುತ್ತಿರುವುದರಿಂದ ನೀರಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ನಗರಸಭೆಯಿಂದ ಕೊರೆಸಲಾಗಿರುವ 27 ಕೊಳವೆಬಾವಿಗಳಲ್ಲಿ 25ರಲ್ಲಿ ಸಮೃದ್ಧ ನೀರು ಬಂದಿದ್ದು ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ತಿಳಿಸಿದರು.

ದೇವರಾಜ ಅರಸು ಭವನದಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ವಿವಿಧ ಸಂಸ್ಥೆಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ಹಿಂದುಳಿದ ವರ್ಗಗಳ ನಾಯಕರನ್ನು ಸನ್ಮಾನಿಸಿ ಮಾತನಾಡಿದರು.

ಯೋಜನೆಯನ್ನು ಮಂಜೂರು ಮಾಡಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾವೆಲ್ಲಾ ಕೃತಜ್ಞರಾಗಿದ್ದೇವೆ. ಅರಸು ಮತ್ತು ಸಿದ್ದರಾಮಯ್ಯ ಅವರು ಮಾಡಿದ ಕ್ರಾಂತಿಕಾರಕ ನಿರ್ಧಾರಗಳಿಂದ ಪೂರ್ಣಾವಧಿ ಅಧಿಕಾರ ನಡೆಸಿದ್ದು ಹಿಂದುಳಿದ ವರ್ಗಗಳ ನಾಯಕರು ಇವರನ್ನು ಅನುಸರಿಸುವ ಮೂಲಕ ಸಾಧಕರಾಗಬೇಕಿದೆ ಎಂದರು.

ADVERTISEMENT

ಹಿಂದುಳಿದ ವರ್ಗಗಳ ಜನಾಂಗದ ಭವನ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಸಮುದಾಯ ಅಗತ್ಯ ಸಹಕಾರ ನೀಡಬೇಕೆಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಸಾದ್‌ ಬಾಬು ಹೇಳಿದರು.

ಶೀಘ್ರದಲ್ಲಿ ಅರಸು ಅವರ ಪ್ರತಿಮೆಯನ್ನು ನಗರದಲ್ಲಿ ಅನಾವರಣ ಮಾಡಲಾಗುತ್ತಿದ್ದು ಸಮಾರಂಭದಲ್ಲಿ ಕನಿಷ್ಠ 25 ಸಾವಿರ ಜನರನ್ನು ಸಂಘಟಿಸಲಾಗುವುದು ಎಂದರು.

ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ನಗರದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲು ದಿನಾಂಕ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ.ಮಂಜುನಾಥ್, ಪಕ್ಷಾತೀತವಾಗಿ ಹಿಂದುಳಿದ ವರ್ಗಗಳ ಸಾಧಕರನ್ನು ಅಭಿನಂದಿಸುತ್ತಿರುವುದು ಅಭಿನಂದನೀಯ. ಒಗ್ಗಟ್ಟು ಮುಂದುವರೆಯುವ ಮೂಲಕ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಆಶಿಸಿದರು.

ಹಿಂದುಳಿದವರ ಸಂಘಟನೆ ಎಂದರೆ ಮುಂದುವರೆದವರ ವಿರೋಧವಲ್ಲ. ಉನ್ನತಿ ಸಾಧಿಸಿದವರನ್ನು ಅನುಸರಿಸಿ ನಾವೂ ಮುನ್ನಡೆ ಹೊಂದಲು ಮುಂದಾಗಬೇಕಿದ್ದು ಇದರಲ್ಲಿ ಯಾವುದೇ ಒಣ ಪ್ರತಿಷ್ಠೆ ಸಲ್ಲ. ಜತೆಗೆ ಹಿಂದುಳಿದ ವರ್ಗಗಳ ಮುಖಂಡರು ತಮ್ಮ ಅನುಭವವನ್ನು ಹಂಚಿಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಹಕಾರ ನೀಡಬೇಕು. ಅರಸು ಶಕ್ತಿಯಿಂದ ಇಂದು ನಾವೆಲ್ಲಾ ಅಧಿಕಾರ ಅನುಭವಿಸುತ್ತಿದ್ದು ಈ ನಿಟ್ಟಿನಲ್ಲಿ ಬಂಗಾರಪ್ಪ ಮತ್ತು ಸಿದ್ದರಾಮಯ್ಯ ಅವರ ಶ್ರಮ ಪ್ರಶ್ನಾತೀತ ಎಂದು ಬಣ್ಣಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ನಿರ್ಣಾಯಕ ಆಗಿರುವ ಹಿಂದುಳಿದವರನ್ನು ಚುನಾವಣೆ ಸಂದರ್ಭದಲ್ಲಿ ಬಳಕೆ ಮಾಡಿಕೊಂಡು ನಂತರ ಕೈ ಬಿಡುವ ಪ್ರವೃತ್ತಿ ಎಲ್ಲ ಪಕ್ಷಗಳಲ್ಲಿ ಸಾಮಾನ್ಯವಾಗಿದ್ದು ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದರು.

ಹಿಂದುಳಿದ ವರ್ಗಗಳ ಮುಖಂಡ ಶಬರೀಶ್, ಕೆ.ರಾಜೇಶ್ ಸಿಂಗ್, ಸುಧಾಕರ್, ಫಲ್ಗುಣ, ನಂದೀಶ್, ಅಶ್ವಥ್, ಸಾದಿಕ್ ಪಾಷ, ಡೆಕೋರೇಷನ್ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.