ಕೆಜಿಎಫ್: ರಾಬರ್ಟ್ಸನ್ಪೇಟೆಯ ಎಂ.ಜಿ.ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿಗಳನ್ನು ಬೆಳಿಗ್ಗೆ 8ರಿಂದ ಸಂಜೆ 6ರವರೆವಿಗೂ ತೆರೆಯಲು ಅವಕಾಶ ನೀಡಲಾಗಿದೆ.
ಎಂ.ಜಿ.ಮಾರುಕಟ್ಟೆಯಲ್ಲಿ ಮಂಗಳವಾರ ಮಾರುಕಟ್ಟೆಯ ವರ್ತಕರ ಸಂಘ ಮತ್ತು ತರಕಾರಿ ಅಂಗಡಿ ಮಾಲೀಕರ ಜತೆ ಮಾತನಾಡಿದ ಶಾಸಕಿ ಎಂ.ರೂಪಕಲಾ, ಮಲೆಯಾಳಿ ಮೈದಾನದಲ್ಲಿಯೇ ಸಗಟು ವ್ಯಾಪಾರ ಮಾಡಬೇಕು. ಚಿಲ್ಲರೆ ವ್ಯಾಪಾರವನ್ನು ಮಾತ್ರ ಎಂ.ಜಿ.ಮಾರುಕಟ್ಟೆಯಲ್ಲಿ ಮಾರಬೇಕು. ಕೊರೊನಾ ವೈರಸ್ ಹರಡದಂತೆ ಎಲ್ಲ ಮುಂಜಾಗ್ರತೆ ವಹಿಸಿದರೆ ಅವಕಾಶ ನೀಡುವುದಾಗಿ ಹೇಳಿದರು.
ನಂತರ ತಹಶೀಲ್ದಾರ್ ಕೆ.ರಮೇಶ್ ಮತ್ತು ನಗರಸಭೆ ಆಯುಕ್ತ ಸಿ.ರಾಜು ಅವರ ಜತೆ ಸಮಾಲೋಚಿಸಿದ ಶಾಸಕಿ ಕೆಲವು ಷರತ್ತುಗಳೊಂದಿಗೆ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರ ಮಾಡಲು ಅವಕಾಶ ನೀಡುವುದಾಗಿ ಪ್ರಕಟಿಸಿದರು.
ಪ್ರತಿದಿನ ಸರದಿ ಮೇರೆಗೆ ಅಂಗಡಿ ತೆಗೆಯಬೇಕು. ಅರವತ್ತು ವರ್ಷ ವಯಸ್ಸು ದಾಟಿದವರು ವ್ಯಾಪಾರಕ್ಕೆ ಕುಳಿತುಕೊಳ್ಳಬಾರದು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂಗಡಿಗಳ ಮುಂಭಾಗದಲ್ಲಿ ವಿಸ್ತರಣೆ ಮಾಡಿಕೊಂಡು ವ್ಯಾಪಾರ ಮಾಡಬಾರದು. ತರಕಾರಿ ಮಾರುಕಟ್ಟೆಯೊಳಗೆ ಯಾವುದೇ ವಾಹನ ಬರಬಾರದು ಎಂದು ಷರತ್ತನ್ನು ವಿಧಿಸಲಾಯಿತು. ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ತರಕಾರಿ ವ್ಯಾಪಾರಿಗಳು ಅಭಯ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.